ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕಾಲ್ ಸೆಂಟರ್ನ ನಾಲ್ವರು ಉದ್ಯೋಗಿಗಳನ್ನು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಡ್ ಕಾನ್ಸ್ಟೆಬಲ್ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್ ಚಲಪತಿ ಸೇರಿ ಎಂಟು ಮಂದಿಯನ್ನು ಬಂಧಿಸಿ, ಇನೊವಾ ಹಾಗೂ ವ್ಯಾಗನರ್ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಉದ್ಯೋಗಿಯ ಖಾತೆಯಿಂದ ₹18.90 ಲಕ್ಷ ಹಣ ಆರೋಪಿಯೊಬ್ಬರ ಖಾತೆಗೆ ವರ್ಗಾವಣೆ ಆಗಿರುವುದು ತನಿಖೆ ವೇಳೆ ಗೊತ್ತಾಗಿದ್ದು, ಆ ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ: ಕೋರಮಂಗಲದಲ್ಲಿರುವ ಕಾಲ್ ಸೆಂಟರ್ನಲ್ಲಿ ನಾಲ್ವರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಅವರ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣವಿರುವ ಮಾಹಿತಿ ಹೊಂದಿದ್ದ ಆರೋಪಿಗಳು, ನಾಲ್ವರನ್ನು ಶುಕ್ರವಾರ ಮಧ್ಯರಾತ್ರಿ ಅಪಹರಿಸಿದ್ದರು.
ಮಾಲೂರಿನ ಖಾಸಗಿ ಕಾಲೇಜಿನಲ್ಲಿ ಅವರನ್ನು ಕೂಡಿ ಹಾಕಿ, ಬೆದರಿಸಿ ಅವರ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಸಂಬಂಧ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.