ಬೆಂಗಳೂರು: ‘ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದಾರೆ. ಕೋವಿಡ್ ಕಡಿಮೆಯಾಗಿಲ್ಲ, ಅದರ ಜೊತೆ ಬದುಕುವುದು ಈಗ ಅನಿವಾರ್ಯ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜಿಸಲು ಸಮರ್ಥನಂ ಅಂಗವಿಕಲರ ಸಂಸ್ಥೆಯು ಆರಂಭಿಸಿರುವ ‘ಸ್ಮಾರ್ಟ್ ಕ್ಲಾಸ್ ರೂಂ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.
‘ಶಿಕ್ಷಣವು ಮೌಲ್ಯಾಧಾರಿತವಾಗಿರಬೇಕು. ಪಾವಿತ್ರ್ಯತೆಯಿಂದಲೂ ಕೂಡಿರಬೇಕು. ಮನುಷ್ಯರಲ್ಲಿರುವ ಅಜ್ಞಾನವನ್ನು ತೊಡೆದು ಹಾಕುವುದು ಶಿಕ್ಷಣದ ಬಹುಮುಖ್ಯ ಗುರಿಯಾಗಬೇಕು’ ಎಂದರು.
ಸಮರ್ಥನಂ ಸಂಸ್ಥಾಪಕ ಮಹಾಂತೇಶ್ ಜಿ., ‘ಡಿಜಿಟಲೀಕರಣವು ಶಿಕ್ಷಣ ಕ್ಷೇತ್ರವನ್ನು ಪರಿಷ್ಕರಣೆಗೆ ಒಳಪಡಿಸಿದೆ. ವರ್ಚುವಲ್ ತರಗತಿಗಳು, ಇ–ಪಠ್ಯಪುಸ್ತಕಗಳಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿದೆ. ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದಸ್ಮಾರ್ಟ್ ಕ್ಲಾಸ್ ರೂಂ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.
‘ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ. ತಂತ್ರಜ್ಞಾನ ಕ್ಷೇತ್ರಕ್ಕೆ ಅವರನ್ನು ಪರಿಚಯಿಸಲೂ ಈ ಕಾರ್ಯಕ್ರಮ ನೆರವಾಗಲಿದೆ. ಸರ್ಕಾರಿ ಶಾಲೆಯ ಶಿಕ್ಷಕರನ್ನೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಣಿಗೊಳಿಸಬೇಕೆಂಬ ಉದ್ದೇಶದಿಂದ ಡಿ.ಎಕ್ಸ್.ಸಿ ತಂತ್ರಜ್ಞಾನ ಸಂಸ್ಥೆ ನಮ್ಮ ಕಾರ್ಯಕ್ಕೆ ಕೈಜೋಡಿಸಿದೆ’ ಎಂದು ತಿಳಿಸಿದರು.
ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ಡಿ.ಎಕ್ಸ್.ಸಿ. ತಂತ್ರಜ್ಞಾನ ಸಂಸ್ಥೆಯ ಸೇವಾ ನಿರ್ವಹಣೆ ವಿಭಾಗದ ನಿರ್ದೇಶಕ ಓಂಕಾರ್ ಜಿ.ರಾವ್, ಎಸ್.ರಾಜೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.