
ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಅರಸು–60 ಕಾರ್ಯಕ್ರಮದಲ್ಲಿ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಪ.ಸ. ಕುಮಾರ್, ಎಂ.ಎಸ್. ಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಮಾಜದಲ್ಲಿ ಗೋದಾನ ಸಹಿತ ಹಲವು ದಾನಗಳಿದ್ದರೂ ಜ್ಞಾನದಾನವೇ ಶ್ರೇಷ್ಟವಾದುದು’ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಹೇಳಿದರು.
ಕಲಾಮಂದಿರ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಕನ್ನಡ ಭವನದ ವರ್ಣ ಕಲಾ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಅರಸು– 60 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಅರಸು ಕಲಾವಿದರಾಗಿ, ಕಲಾ ಶಿಕ್ಷಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ತಮ್ಮಲ್ಲಿರುವ ಜ್ಞಾನವನ್ನು ನಿಸ್ಪೃಹವಾಗಿ ಹಂಚಿದ್ದಾರೆ. ಜ್ಞಾನವನ್ನು ಹಂಚಿದರೆ ಅದು ಪೀಳಿಗೆಗಳವರೆಗೂ ಬೆಳೆಯುತ್ತಾ ಹೋಗುತ್ತದೆ. ಹೀಗೆ ಜ್ಞಾನ ಹಂಚಿದವರು ದೊಡ್ಡ ಮಟ್ಟದಲ್ಲಿ ಜನ ಸಂಪಾದನೆ ಮಾಡಲಿದ್ದಾರೆ. ಸಮಾಜದಲ್ಲಿ ಇದಕ್ಕಿಂತ ದೊಡ್ಡ ಗೌರವ ಬೇಕಿಲ್ಲ’ ಎಂದು ಹೇಳಿದರು.
‘ಭಾರತದಲ್ಲಿನ ಕಲಾ ಪ್ರಕಾರಗಳು, ಕಲೆಗಳ ಪಲ್ಲಟ, ಕಲಾ ಶಾಲೆಗಳ ಪ್ರಭಾವಗಳ ಕುರಿತು ಅಕಾಡೆಮಿಯಿಂದ ಮುಂದಿನ ತಿಂಗಳು ಪುಸ್ತಕ ಹೊರ ತರಲಾಗುವುದು. ದೇಶದ ಪ್ರಮುಖ ಕಲಾ ಶಾಲೆಗಳ 16 ಮಂದಿ ಹಿರಿಯರು ಕಲಾ ಹಾದಿ ಕುರಿತು ಬರೆದಿದ್ದಾರೆ’ ಎಂದರು.
ಕಲಾವಿದ ಎಂ.ಎಸ್. ಮೂರ್ತಿ ಮಾತನಾಡಿ, ‘ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ರನ್ನ, ಪಂಪನ ಕಾಲದ ಇತಿಹಾಸವನ್ನು ನೀಡಬಹುದು. ಕಲೆಗೆ ಇಂತಹ ದೀರ್ಘ ಇತಿಹಾಸವಿಲ್ಲದೇ ಇದ್ದರೂ ಮಹತ್ವವಿದೆ. ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ’ ಎಂದರು.
ಕವಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಕಲಾವಿದ ಬಿ.ಎಂ.ವೆಂಕಟೇಶ್, ಕಲಾಮಂದಿರ ಕಲಾ ಶಾಲೆಯ ನಿವೃತ್ತ ಪ್ರಾಂಶುಪಾಲ ತಿರುಣಾವುಕರಸು, ಕಾಂತರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.