ADVERTISEMENT

ಕೊಡಿಗೇಹಳ್ಳಿ: ರೈಲು ಹಳಿ ದಾಟಲು ಪಡಿಪಾಟಲು- ಆರಕ್ಕೇರದ, ಮೂರಕ್ಕಿಳಿಯದ ಕಾಮಗಾರಿ

ಮಾನಸ ಬಿ.ಆರ್‌
Published 23 ಆಗಸ್ಟ್ 2018, 20:02 IST
Last Updated 23 ಆಗಸ್ಟ್ 2018, 20:02 IST
ಅಂಡರ್‌ಪಾಸ್‌ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈಲು ಚಲಿಸಿದ ದೃಶ್ಯ   ಪ್ರಜಾವಾಣಿ ಚಿತ್ರಗಳು/ಸತೀಶ್ ಬಡಿಗೇರ್
ಅಂಡರ್‌ಪಾಸ್‌ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈಲು ಚಲಿಸಿದ ದೃಶ್ಯ ಪ್ರಜಾವಾಣಿ ಚಿತ್ರಗಳು/ಸತೀಶ್ ಬಡಿಗೇರ್   

ಬೆಂಗಳೂರು: ಶಾಲೆಗೆ ಹೋಗುವ ಮಕ್ಕಳು, ವೃದ್ಧರು, ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಹಳಿ ದಾಟಬೇಕಾದ ಪರಿಸ್ಥಿತಿ ಇಲ್ಲಿನದು. ಈ ಹಿಂದೆ ಗ್ರಾಹಕರಿಂದ ಗಿಜಿಗುಡುತ್ತಿದ್ದ ಇಲ್ಲಿನ ಅಂಗಡಿಗಳು ಈಗ ವ್ಯಾಪಾರ ಇಲ್ಲದೆ ಮುಚ್ಚುವ ಆತಂಕ ಎದುರಿಸುತ್ತಿವೆ.

ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಇರುವ ಕೊಡಿಗೇಹಳ್ಳಿ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ ತಂದೊಡ್ಡಿರುವ ಪರಿಸ್ಥಿತಿ ಇದು. ಈ ಪರಿಸರದ ನೂರಾರು ಜನರ ಬದುಕನ್ನು ಅತಂತ್ರ ಪರಿಸ್ಥಿತಿಗೆ ದೂಡಿರುವ ಈ ಕಾಮಗಾರಿಯ ವೇಗ ಮಾತ್ರ ಆರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ!

ಸಮನ್ವಯ ಕೊರತೆ

ADVERTISEMENT

ರೈಲ್ವೆ ಇಲಾಖೆ ಅಂಡರ್‌ಪಾಸ್‌ ಕಾಮಗಾರಿ ನಡೆಸುತ್ತಿದೆ. ಇದರ ಸಂಪರ್ಕ ರಸ್ತೆಗೆ ಭೂಸ್ವಾಧೀನ ಮಾಡಿಕೊಡುವ ಜವಾಬ್ದಾರಿ ಬಿಬಿಎಂಪಿಯದ್ದು. ಆದರೆ, ಎರಡೂ ಇಲಾಖೆಗಳ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕೆಲಸಕ್ಕೆ ಹಿನ್ನಡೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ರೈಲ್ವೆ ಇಲಾಖೆ ನಡೆಸಬೇಕಾದ ಕೆಲಸ ಶೇ 80ರಷ್ಟು ಪೂರ್ಣಗೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ, ಬಿಬಿಎಂಪಿ ವತಿಯಿಂದ ಭೂಸ್ವಾಧೀನದ ಕೆಲಸ ಪೂರ್ಣಗೊಂಡಿಲ್ಲ.

‘ಈ ಕಾಮಗಾರಿ ಆರಂಭವಾಗುವುದಕ್ಕೂ ಮುಂಚೆ ರೈಲು ಬಂದಾಗ ಗೇಟ್‌ ಹಾಕುತ್ತಿದ್ದರು. ಐದು ನಿಮಿಷ ಕಾದು ಹಳಿ ದಾಟುತ್ತಿದ್ದೆವು. ಆದರೆ, ಈಗ ಅಂಡರ್‌ಪಾಸ್‌ ಕೆಲಸವೂ ಮುಗಿದಿಲ್ಲ, ಅದರ ಸಂಪರ್ಕ ರಸ್ತೆಯೂ ಪೂರ್ಣಗೊಂಡಿಲ್ಲ. ಹಳಿ ಮೇಲೆ ನಡೆದೇ ಹೋಗಬೇಕು. ಅಭಿವೃದ್ಧಿ ಹೆಸರಲ್ಲಿ ನಮಗೆ ಹಿಂಸೆ ನೀಡಲಾಗುತ್ತಿದೆ. ಅಂಡರ್‌ಪಾಸ್‌ ಕೆಲಸ ವಾರಕ್ಕೊಮ್ಮೆ ಮಾತ್ರ ನಡೆಯುತ್ತದೆ. ಕಂಬಿ ಕೂರಿಸಿ ಹೋದವರು ನಾಪತ್ತೆಯಾಗುತ್ತಾರೆ’ ಎಂದು ಊರಿನ ಹಿರಿಯ ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಂಡರು.

ಕಾಮಗಾರಿ ಸ್ಥಳದಲ್ಲಿ ನಾಲ್ವರು ಕಾರ್ಮಿಕರು ಮಾತ್ರ ಕೆಲಸ ನಿರತರಾಗಿದ್ದುದು ಇತ್ತೀಚೆಗೆ ಕಂಡುಬಂತು.

ಊರ ಯಜಮಾನ ಹನುಮಯ್ಯ ಬಡಾವಣೆ ಬಳಿ ರೈಲ್ವೆ ಹಳಿ ದಾಟುತ್ತಿರುವ ಮಹಿಳೆ

ಭೂಸ್ವಾಧೀನ ವಿಳಂಬ

ಮೊದಲು ಇಲ್ಲಿ 120 ಅಡಿ ಅಗಲದ ಅಂಡರ್‌ಪಾಸ್‌ ನಿರ್ಮಿಸುವ ಚಿಂತನೆ ಇತ್ತು. ಜನ ವಿರೋಧ ವ್ಯಕ್ತಪಡಿಸಿದ್ದರಿಂದ ಅಗಲವನ್ನು 80 ಅಡಿಗೆ ಸೀಮಿತಗೊಳಿಸಲಾಯಿತು. ಪರಿಹಾರದ ಮೊತ್ತ ಕೈಸೇರಿದ ಬಳಿಕವಷ್ಟೇ ಜಾಗ ಬಿಟ್ಟುಕೊಡುತ್ತೇವೆ ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಹಾಗಾಗಿ ಭೂ ಸ್ವಾಧೀನದ ಪ್ರಕ್ರಿಯೆಯೂ ತಡವಾಗಿದೆ.

‘ನಾವು ಪ್ರತಿ ಚದರ ಅಡಿಗೆ ₹ 8,689 ಕೊಡಲು ಒಪ್ಪಿಕೊಂಡೆವು. ಹೆಚ್ಚಿನವರು ಇಷ್ಟು ಪರಿಹಾರಕ್ಕೆ ಒಪ್ಪಿ ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ, ನಾರಾಯಣಪ್ಪ ಎಂಬುವವರು ಮಾತ್ರ ಇನ್ನೂ ಜಾಗ ಬಿಟ್ಟುಕೊಟ್ಟಿಲ್ಲ. ಅವರು ಹೆಚ್ಚು ಹಣ ಕೇಳುತ್ತಿದ್ದಾರೆ. ಇದರಿಂದ ಕಾಮಗಾರಿಗೆ ತೊಂದರೆಯಾಗಿದೆ’ ಎಂದು ಬಿಬಿಎಂಪಿ ಅಧಿಕಾರಿ ಮುಕುಂದ್ ಹೇಳಿದರು.

‘ನಮ್ಮ ಸಹೋದರನಿಗೆ ಪರಿಹಾರದ ಹಣ ಸಿಕ್ಕಿತ್ತು. ಅವರು ರಾತ್ರೋರಾತ್ರಿ ಮನೆ ಖಾಲಿ ಮಾಡಿ ಅಂಡರ್‌ಪಾಸ್‌ಗಾಗಿ ಜಾಗ ಬಿಟ್ಟುಕೊಟ್ಟರು. ಆದರೆ ನಮಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ನಾವು ಏಕೆ ಖಾಲಿ ಮಾಡಬೇಕು ಹೇಳಿ’ ಎಂದು ಪ್ರಶ್ನಿಸುತ್ತಾರೆ ಅಂಡರ್‌ಪಾಸ್‌ ಪಕ್ಕದ ನಿವೇಶನದ ಮಾಲೀಕ ನಾರಾಯಣಪ್ಪ.

‘ಪರಿಹಾರ ಕೊಡದೇ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳು ಗಲಾಟೆ ಮಾಡಿದರು. ಆದ್ದರಿಂದ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ. ಹಣ ಕೊಟ್ಟರೆ ಇಂದೇ ಖಾಲಿ ಮಾಡಲು ನಾವು ಸಿದ್ಧ. ಇದನ್ನು ಕೇಳಲು ಹೋದರೆ ಹಣದ ತೊಂದರೆ ಇದೆ. ಸದ್ಯದಲ್ಲೇ ಕೊಡುತ್ತೇವೆ ಎನ್ನುವ ನೆಪ ಹೇಳುತ್ತಾರೆ’ ಎಂದು ಅವರು ವಿವರಿಸಿದರು.

ವ್ಯಾಪಾರಕ್ಕೆ ಧಕ್ಕೆ

ಅಂಡರ್‌ಪಾಸ್ ಕೆಲಸದಿಂದಾಗಿ ನಾಲ್ಕು ವರ್ಷಗಳಿಂದ ಇಲ್ಲಿನ ರಸ್ತೆಯ ಅಕ್ಕಪಕ್ಕದ ಅಂಗಡಿಗಳಲ್ಲಿ ವ್ಯಾಪಾರಕ್ಕೂ ಧಕ್ಕೆ ಉಂಟಾಗಿದೆ. ತಿಂಗಳಿಗೆ ₹ 50,000 ವ್ಯಾಪಾರವಾಗುತ್ತಿದ್ದ ಕಡೆ ಈಗ ಅದರ ಶೇ 10ರಷ್ಟೂ ವ್ಯಾಪಾರವಾಗುತ್ತಿಲ್ಲ. ಇಲ್ಲಿನ ಮನೆಗಳ ಬಾಡಿಗೆ ₹ 5 ಸಾವಿರದಿಂದ ₹ 3 ಸಾವಿರಕ್ಕೆ ಇಳಿದಿದೆ.

‘ಪೊಲೀಸರನ್ನು ಕರೆತಂದು ಒತ್ತಡ ಹೇರಿ ನಮ್ಮ ಅಂಗಡಿ ಖಾಲಿ ಮಾಡಿಸಲು ನೋಡಿದರು. ನಾವು ಪರಿಹಾರ ಕೊಡದೆ ಖಾಲಿ ಮಾಡಲು ಒಪ್ಪಲಿಲ್ಲ. ನಾಲ್ಕು ವರ್ಷಗಳಿಂದ ನಮ್ಮ ಅಂಗಡಿಗೆ ಬರುವ ವಾಹನಗಳನ್ನು ನಿಲ್ಲಿಸಲು ಜಾಗ ಇಲ್ಲ. ಹಾಗಾಗಿ ವ್ಯಾಪಾರವೂ ಕುಸಿದಿದೆ. ನಮ್ಮ ಬದುಕು ದುರ್ಬರವಾಗಿದೆ’ ಎಂದು ಇಲ್ಲಿನ ಮಾರುತಿ ಟ್ರೇಡರ್ಸ್ ಮಾಲೀಕ ಜಯರಾಂ ಅಳಲು ತೋಡಿಕೊಂಡರು.

ಅಂಡರ್‌ಪಾಸ್‌ ಕಾಮಗಾರಿಯಿಂದಾಗಿ ವಾಹನಗಳು ಒಂದು ಕಿ.ಮೀ ದಾರಿಗೆ 4 ಕಿ.ಮೀ ಬಳಸಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಇಲ್ಲಿ ಸರಿಯಾದ ರಸ್ತೆ ಇಲ್ಲ. ಬಸ್‌ಗಳ ಸಂಪರ್ಕ ಮೊದಲೇ ಇಲ್ಲ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರ ಬಳಿಯ ತಿಂಡ್ಲು, ಬೊಮ್ಮಸಂದ್ರದ ಜನರು ಈ ರೈಲ್ವೆ ಹಳಿ ದಾಟಿಕೊಂಡೇ ಓಡಾಡಬೇಕು. ಈ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಂಡರೆ ಈ ಪರಿಸರದ ಜನರಿಗೆ ನೆಲಮಂಗಲ, ಹೆಸರಘಟ್ಟ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಸುಲಭವಾಗುತ್ತದೆ.

ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ಹಳಿಯಲ್ಲಿ ಸಾವು–ನೋವು

‘ಇಲ್ಲಿ ರೈಲ್ವೆ ಹಳಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ಒಬ್ಬ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಅನೇಕ ಪ್ರಾಣಿಗಳು ಸತ್ತಿವೆ. ಇತ್ತೀಚೆಗೆ ಮೂರು ಹಸುಗಳು ಸತ್ತಿವೆ‘ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ದುರ್ವಾಸನೆ: ಕೆಲಸ ನಡೆಯುತ್ತಿರುವ ಕಡೆ ಮಳೆ ನೀರು ನಿಂತು ವಾಸನೆ ಬರುತ್ತಿದೆ. ಇದರಲ್ಲಿ ಒಳಚರಂಡಿ, ಕೊಳಚೆ ನೀರು ಕೂಡ ಸೇರಿಕೊಂಡಿದೆ. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಮುಖ್ಯಾಂಶಗಳು

* ₹51 ಕೋಟಿ ಯೋಜನೆಯ ಮೊತ್ತ

*₹ 22.14 ಕೋಟಿ ಭೂಸ್ವಾಧೀನಕ್ಕಾಗಿ ಮಾಡಿರುವ ಖರ್ಚು

*73 ಸ್ವಾಧೀನಪಡಿಸಿಕೊಂಡಿರುವ ಆಸ್ತಿ (ಕಟ್ಟಡಗಳು)

*₹ 8,689 ಪ್ರತಿ ಚದರ ಮೀಟರ್‌ಗೆ ನೀಡಿರುವ ಪರಿಹಾರ ಮೊತ್ತ

*80 ಅಡಿ ಅಂಡರ್‌ಪಾಸ್‌ನ ಅಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.