ADVERTISEMENT

₹ 5 ಲಕ್ಷ ಲಂಚ ಪಡೆದ ಆರೋಪ; ಎಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 20:47 IST
Last Updated 14 ಜೂನ್ 2021, 20:47 IST

ಬೆಂಗಳೂರು: ಪ್ರಕರಣವೊಂದರಲ್ಲಿ ನಿರಪರಾಧಿ ಎಂದು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಆರೋಪಿಯಿಂದ ₹ 5 ಲಕ್ಷ ಲಂಚ ಪಡೆದ ಆರೋಪದಡಿ ಕೊಡಿಗೇಹಳ್ಳಿ ಎಎಸ್‌ಐ ದಯಾನಂದಸ್ವಾಮಿ ಅವರನ್ನು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅಮಾನತು ಮಾಡಿದ್ದಾರೆ.

ಎಎಸ್‌ಐ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಶಿಫಾರಸು ಮಾಡಿ ಕಮಿಷನರ್ ಆದೇಶ ಸಹ ಹೊರಡಿಸಿದ್ದಾರೆ.

‘ಉದ್ಯಮಿ ಭರತ್ ಶೆಟ್ಟಿ ಎಂಬುವರ ವಿರುದ್ಧ ಉದ್ದೇಶಪೂರ್ವಕವಾಗಿ ವಂಚನೆ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರಲ್ಲಿ ಭರತ್‌ ಶೆಟ್ಟಿ ನಿರಾಪರಾಧಿ ಎಂದು ಹೇಳಿ ನ್ಯಾಯಾಲಯಕ್ಕೆ ಬಿ ರಿಪೋ‌ರ್ಟ್ ಸಲ್ಲಿಸಲು ಎಎಸ್‌ಐ ದಯಾನಂದಸ್ವಾಮಿ ₹ 5 ಲಕ್ಷ ಲಂಚ ಪಡೆದಿದ್ದರು ಎನ್ನಲಾಗಿದೆ. ಲಂಚ ಪಡೆದ ನಂತರವೂ ಎಎಸ್‌ಐ, ಬಿ ರಿಪೋರ್ಟ್ ಸಲ್ಲಿಸಿಲ್ಲ. ಹಣಕ್ಕಾಗಿ ಪುನಃ ಪೀಡಿಸುತ್ತಿದ್ದರು. ಬೇಸತ್ತ ಉದ್ಯಮಿ, ಠಾಣೆ ಇನ್‌ಸ್ಪೆಕ್ಟರ್ ಹಾಗೂ ಎಸಿಬಿ ಅಧಿಕಾರಿಗಳಿಗೆ ಇತ್ತೀಚೆಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಆಂತರಿಕ ತನಿಖೆ ನಡೆಸಿದ್ದರು. ಎಎಸ್‌ಐ ಲಂಚ ಪಡೆದಿದ್ದು ಸಾಬೀತಾಗಿತ್ತು. ಎಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಮಿಷನರ್‌ ಅವರಿಗೆ ತನಿಖಾ ವರದಿ ಸಲ್ಲಿಸಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.