ADVERTISEMENT

ದುರಾಡಳಿತ ಕೊನೆಗೊಳಿಸಲು ಹೊಸ ಪಕ್ಷ: ಕೋಡಿಹಳ್ಳಿ ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:03 IST
Last Updated 27 ನವೆಂಬರ್ 2025, 16:03 IST
ಕೋಡಿಹಳ್ಳಿ ಚಂದ್ರಶೇಖರ 
ಕೋಡಿಹಳ್ಳಿ ಚಂದ್ರಶೇಖರ    

ಬೆಂಗಳೂರು: ‘ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳ ಲೂಟಿಕೋರ ದುರಾಡಳಿತದಿಂದ ವಿಮೋಚನೆಗೊಳಿಸುವ ಉದ್ದೇಶದಿಂದ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗಿದೆ’ ಎಂದು ನವ ಕರ್ನಾಟಕ ನಿರ್ಮಾಣ ಆಂದೋಲನ ಪಕ್ಷದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು. 

ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಈ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ನಗರದಲ್ಲಿ ಗುರುವಾರ ಅವರು ಬಿಡುಗಡೆ ಮಾಡಿದರು. ‘ಬಹುಸಂಖ್ಯಾತ ಕನ್ನಡಿಗರ ಅಪೇಕ್ಷೆಯಂತೆ ಚಳವಳಿಗಾರರೆಲ್ಲ ಒಟ್ಟಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದೇವೆ. ರಾಜ್ಯದಲ್ಲಿ ಅಧಿಕಾರ ನಡೆಸಿದ, ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳ ಕೆಟ್ಟ ನೀತಿಗಳ ಪರಿಣಾಮವಾಗಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಸೇರಿ ಎಲ್ಲ ವರ್ಗಗಳ ಜನರು ಬೇಸತ್ತಿದ್ದಾರೆ’ ಎಂದು ಹೇಳಿದರು. 

‘ಸಮೃದ್ಧವಾಗಿರುವ ನಮ್ಮ ನಾಡನ್ನು ರಾಷ್ಟ್ರೀಯ ಪಕ್ಷಗಳ ಜಾತಿವಾದಿ, ಕೋಮುವಾದಿ, ರೈತ-ದಲಿತ-ಕಾರ್ಮಿಕ ವಿರೋಧಿ ಆಡಳಿತದಿಂದ ಮುಕ್ತಗೊಳಿಸಬೇಕಾದರೆ, ರಾಜ್ಯದ ಹಿತಾಸಕ್ತಿಗೆ ಬದ್ಧವಾದ ನಮ್ಮದೇ ಆದ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸುವುದು ಏಕೈಕ ಪರಿಹಾರವಾಗಿತ್ತು’ ಎಂದರು. 

ADVERTISEMENT

‘ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಎನ್. ಮೂರ್ತಿ, ಆರ್. ಮೋಹನ್ ರಾಜ್, ಯೂನಸ್ ಖಾನ್, ಭಕ್ತರಹಳ್ಳಿ ಬೈರೇಗೌಡ, ಪಿ. ಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಂ. ಗೋಪಿನಾಥ್, ರಾಜ್ಯ ಕಾರ್ಯದರ್ಶಿಗಳಾಗಿ ಕೆ.ಎಂ. ರಿಸಲ್ದಾರ್, ಶೆ.ಬೋ. ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.