ADVERTISEMENT

ಕಲುಷಿತ ಕೆರೆ ಮೀನುಗಳ ಮಾರಣಹೋಮ

​ಪ್ರಜಾವಾಣಿ ವಾರ್ತೆ
Published 29 ಮೇ 2020, 18:16 IST
Last Updated 29 ಮೇ 2020, 18:16 IST
ಕೆರೆಯಲ್ಲಿ ಸತ್ತುಬಿದ್ದಿರುವ ಮೀನುಗಳು
ಕೆರೆಯಲ್ಲಿ ಸತ್ತುಬಿದ್ದಿರುವ ಮೀನುಗಳು   

ರಾಜರಾಜೇಶ್ವರಿನಗರ (ಬೆಂಗಳೂರು): ಕೊಮ್ಮಘಟ್ಟ ಕೆರೆಗೆ ಸುತ್ತ–ಮುತ್ತಲ ಗ್ರಾಮಗಳ ಬಡಾವಣೆಯಿಂದ ಮತ್ತು ಕೈಗಾರಿಕೆಗಳಿಂದ ಕಲುಷಿತ ನೀರು, ರಾಸಾಯನಿಕ ಹರಿದ ಪರಿಣಾಮ ಸಾವಿರಾರು ಮೀನುಗಳು ಅಸುನೀಗಿವೆ.

ಒಳಚರಂಡಿ ಹಾಗೂ ದೊಡ್ಡಬಸ್ತಿ ಬಳಿಯ ಸಣ್ಣ ಕೈಗಾರಿಕೆಗಳಿಂದ ಕಲುಷಿತ ನೀರು ನೇರವಾಗಿ ಕೆರೆ ಸೇರುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ದೊಡ್ಡಬಸ್ತಿಯ ರಾಮಸಂದ್ರ ಕೆರೆಯು ಕಲುಷಿತಗೊಂಡಿದ್ದು ಅದನ್ನು ಶುದ್ಧೀಕರಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಆ ನೀರನ್ನು ಕೊಮ್ಮಘಟ್ಟ ಕೆರೆಗೆ ಹರಿಸಿದ್ದು ಈ ಅವಾಂತರಕ್ಕೆ ಕಾರಣವಾಗಿದೆ’ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘ದೊಡ್ಡಬಸ್ತಿ ರಾಮಸಂದ್ರ ಕೆರೆಯಿಂದ ನೀರು ಬಿಟ್ಟಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಎಂಬುದು ಸುಳ್ಳು. ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೊಮ್ಮಘಟ್ಟ ಕೆರೆ ಕಲುಷಿತಗೊಂಡಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಮೊದಲೇ ಹೇಳಿತ್ತು. ನೋಟಿಸ್‌ ಕೂಡ ನೀಡಿತ್ತು. ಅದಕ್ಕೆ ಕ್ರಮ ಕೈಗೊಳ್ಳದೆ ಈಗ ನಮ್ಮ ಮೇಲೆ ಹೇಳುವುದು ಸರಿಯಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

‘ಮೀನುಗಳು ಸತ್ತಿರುವುದರಿಂದ ಕೆರೆಯ ಸುತ್ತ–ಮುತ್ತ ದುರ್ವಾಸನೆ ಬರುತ್ತಿದೆ. ಅಧಿಕಾರಿಗಳು ಆರೋಪ–ಪ್ರತ್ಯಾರೋಪ ಬಿಟ್ಟು ಕೆರೆಯನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.