ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಅಧ್ಯಯನ ನಡೆಸಲು ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ಅವರ ಅಧ್ಯಕ್ಷತೆಯಲ್ಲಿ ‘ಶೈಕ್ಷಣಿಕ ಪಠ್ಯಕ್ರಮ ಪರಿಶೀಲನೆ ಸಮಿತಿ’ಯನ್ನು ಕೆಪಿಸಿಸಿ ರಚಿಸಿದೆ.
‘ಪಠ್ಯಕ್ರಮದಲ್ಲಿ ಪೂರ್ವಗ್ರಹಪೀಡಿತ ದೋಷಗಳಿವೆ. ಅದನ್ನು ಅಧ್ಯಯನ ನಡೆಸಿ, ಜನಜಾಗೃತಿ ಮೂಡಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಈ ಸಮಿತಿಯ ಸಂಚಾಲಕರು. ಉಳಿದಂತೆ, ವಿಧಾಪರಿಷತ್ ಮಾಜಿ ಸಭಾಪತಿ ಡೇವಿಡ್ ಸೀಮೆಯೊನ್, ನಿವೃತ್ತ ಪ್ರೊಫೆಸರ್ ಬಸವರಾಜಯ್ಯ, ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷಾ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ, ಶಿಕ್ಷಣ ತಜ್ಞ ನಿಕೇತ್ ರಾಜ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ವಕೀಲರಾದ ಕವಿತಾ ಗೌಡ ಮತ್ತು ಅಹ್ಮದ್ ಸದಸ್ಯರು.
‘ಶೈಕ್ಷಣಿಕ ಪಠ್ಯಕ್ರಮದಲ್ಲಿ ಆಗಿರುವ ಇತಿಹಾಸ ವಿರೋಧಿ, ಸಮಾಜ ವಿರೋಧಿ ಲೋಪದೋಷಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲಿರುವ ಈ ಸಮಿತಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಒತ್ತಾಯಿಸಲಿದೆ’ ಎಂದೂ ಶಿವಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.