ಕೆ.ಆರ್.ಪುರ: ‘ಕೊರೊನಾದಂತಹ ಕ್ಲಿಷ್ಟಕರ ಸಮಯದಲ್ಲಿ ಪ್ರಾಣದ ಹಂಗು ತೊರೆದು ಮನೆ, ಮಕ್ಕಳು, ಕುಟುಂಬದಿಂದ ದೂರ ಉಳಿದು ಲಕ್ಷಾಂತರ ಜನರ ಪ್ರಾಣ ಉಳಿಸಿದ ವೈದ್ಯರ ಸೇವೆ ಅನನ್ಯ’ ಎಂದು ಸಂಸದ ಪಿ.ಸಿ. ಮೋಹನ್ ಹೇಳಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಾಚರಕನಹಳ್ಳಿ ವಾರ್ಡ್ನಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೈದ್ಯರು ಕೊರೊನಾ ಒಂದನೇ ಅಲೆ ಆರಂಭವಾದಾಗಿನಿಂದಲೂ ಸಾವಿರಾರು ಜನರ ಆರೋಗ್ಯ ರಕ್ಷಣೆ ಜೊತೆಗೆ ನಿರಂತರ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕೊರೊನಾದಿಂದ ಸಾವಿರಾರು ವೈದ್ಯರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಸೇವೆ ಮುಂಚೂಣಿ ಸ್ಥಾನವನ್ನು ಗಳಿಸಿದ್ದು ಜನಮಾನಸದಲ್ಲಿ ಉಳಿಯುವ ಕರ್ತವ್ಯವನ್ನು ಮಾಡಿದ್ದಾರೆ. ಅವರನ್ನು ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು’ ಎಂದು ಹೇಳಿದರು.
ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ, ‘ನಮ್ಮ ದೇಶದಲ್ಲಿ ಸಂಸ್ಕೃತ, ಸಂಸ್ಕಾರ, ಆಚಾರ ವಿಚಾರಗಳನ್ನು ಹೆಚ್ಚಾಗಿ ನಂಬಿರುವ ನಾವು ಗುರು ಹಿರಿಯರಿಗೆ ಗೌರವ ಸಲ್ಲಿಸುವ ಹಾಗೆ ವೈದ್ಯರ ಸೇವೆಗೂ ಗೌರವ ಸಲ್ಲಬೇಕು. ಬಜೆಟ್ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ಪ್ರತ್ಯೇಕ ಅನುದಾನವನ್ನು ತೆಗೆದಿಡಬೇಕು’ ಎಂದು ಒತ್ತಾಯ ಮಾಡಿದರು.
ಬಿಜೆಪಿ ಮುಖಂಡರಾದ ಎಂ.ಎನ್.ರೆಡ್ಡಿ, ರಾಜಣ್ಣ, ಕೆ.ಸಿ.ಮೂರ್ತಿ, ಅನಿಲ್ ರೆಡ್ಡಿ, ಸರ್ವಜ್ಞನಗರ ಕ್ಷೇತ್ರ ಘಟಕದ ಅಧ್ಯಕ್ಷ ಮುನಿರಾಜ್ ಕಾರ್ಣಿಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.