ಕೆ.ಆರ್. ಪುರ: ಲಾಕ್ಡೌನ್ ವೇಳೆ ಕೊರೊನಾ ನೆಪದಲ್ಲಿ ಕಿಡಿಗೇಡಿಗಳು ನೂರಾರು ಶೆಡ್ಗಳನ್ನು ನೆಲಸಮಗೊಳಿಸಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.
ರಾಯಚೂರು, ಕಲಬುರ್ಗಿ, ಬೆಳಗಾವಿ, ಬಳ್ಳಾರಿ, ಯಾದಗಿರಿ ಕಡೆಯಿಂದ ಕೆಲಸಕ್ಕೆ ಬಂದ ನೂರಾರು ಕುಟುಂಬಗಳು ಎಚ್.ಬಿ.ಆರ್.ವಾರ್ಡಿನ ರಾಮ ದೇವಸ್ಥಾನ ಬಳಿ ಹೊಂದಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಶೆಡ್ ಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಹಲವು ಕೂಲಿ ಕಾರ್ಮಿಕರು ಊರಿಗೆ ತೆರಳಿದ ವೇಳೆ ದುಷ್ಕರ್ಮಿಗಳು 150ಕ್ಕೂ ಹೆಚ್ಚು ಶೆಡ್ಗಳನ್ನು ನೆಲಸಮಗೊಳಿಸಿದ್ದಾರೆ. 15 ಶೆಡ್ಗಳನ್ನು ಸುಟ್ಟು ಹಾಕಿದ್ದಾರೆ. 18 ಶೆಡ್ಗಳಲ್ಲಿ ವಾಸಿಸುತ್ತಿರುವವರು ಕೂಡಲೇ ಖಾಲಿ ಮಾಡುವಂತೆ ಬೆದರಿಕೆ ಒಡ್ಡಿದ್ದಾರೆ.
ಲಾಕ್ಡೌನ್ ಮುಗಿದ ಬಳಿಕ ಖಾಲಿ ಮಾಡುತ್ತೇವೆ ಎಂದು ಕೇಳಿಕೊಂಡರೂ ಸ್ಪಂದಿಸಲಿಲ್ಲ. ಗುಡಿಸಲುಗಳನ್ನು ನೆಲಸಮ ಮಾಡಿದರು ಎಂದು ನಿವಾಸಿಗಳು ಅಳಲು ತೋಡಿಕೊಂಡರು.
’20 ವರ್ಷಗಳಿಂದ ಶೆಡ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದೇವೆ. ಕೊರೊನಾ ಹೆಸರಿನಲ್ಲಿ ಏಕಾಏಕಿ ಶೆಡ್ಗಳ ನೆಲಸಮ ಮಾಡುತ್ತಿದ್ದಾರೆ. ಊಟ ನೀರು ಕೊಡುವುದನ್ನು ನಿಲ್ಲಿಸಿದ್ದಾರೆ‘ ಎಂದು ಮಹಿಳೆ ಅಳಲು ತೋಡಿಕೊಂಡರು.
‘ಇಬ್ಬರು ಮಕ್ಕಳ ಪೈಕಿ ಒಬ್ಬನಿಗೆ ಮಾತು ಬರುವುದಿಲ್ಲ. ಬೆಂಗಳೂರಿನಲ್ಲಿ ಮಾತು ಬಾರದ ಮಕ್ಕಳಿಗೆ ತರಬೇತಿ ನೀಡುತ್ತಾರೆ ಎಂಬ ಕಾರಣಕ್ಕೆ ಇಲ್ಲಿ ಶೆಡ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಬಾಡಿಗೆ ಕಟ್ಟಲು ಶಕ್ತಿ ಇಲ್ಲ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸಬೇಕು. ಈಗ ಶೆಡ್ ಖಾಲಿ ಮಾಡಿ ಎಲ್ಲಿಗೆ ಹೋಗುವುದು‘ ಎಂದು ಮಹಿಳೆ ಕಣ್ಣೀರು ಹಾಕಿದರು.
‘ತೆರವುಗೊಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಲಾಕ್ಡೌನ್ ಹಿನ್ನೆಲೆ ಬಡವರಿಗೆ ದಿನಸಿ ಊಟ ವಿತರಿಸುವುದರಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್.ಬಿ.ಆರ್.ವಾರ್ಡ್ ಪಾಲಿಕೆ ಸದಸ್ಯ ಆನಂದ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.