ಬೆಂಗಳೂರು: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡುವ ಸಲುವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನ.11ರಿಂದ 13ರವರೆಗೆ 'ಕೃಷಿ ಮೇಳ' ಆಯೋಜಿಸಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ್,'ಕೊರೊನಾ ಇರುವುದರಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಪ್ರತ್ಯಕ್ಷ ಹಾಗೂ ಡಿಜಿಟಲ್ ಮುಖಾಂತರವೂ ಮೇಳ ಹಮ್ಮಿಕೊಂಡಿದ್ದೇವೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ನ ಉಪ ಮಹಾನಿರ್ದೇಶಕ ಎ.ಕೆ.ಸಿಂಗ್ ಅವರು ಆನ್ಲೈನ್ ಮೂಲಕ ಬುಧವಾರ (ನ.11) ಬೆಳಿಗ್ಗೆ 11 ಗಂಟೆಗೆ ಮೇಳ ಉದ್ಘಾಟಿಸಲಿದ್ದಾರೆ' ಎಂದು ತಿಳಿಸಿದರು.
'ಮೂರು ಹೊಸ ತಳಿಗಳು ಹಾಗೂ 17 ನೂತನ ತಂತ್ರಜ್ಞಾನಗಳ ಕೃಷಿ ಪ್ರಾತ್ಯಕ್ಷಿಕೆಯನ್ನು ಮೇಳದಲ್ಲಿ ವೀಕ್ಷಿಸಬಹುದು. ರೈತರ ಅನುಕೂಲಕ್ಕಾಗಿ 25ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಇರಲಿವೆ'ಎಂದರು.
‘ಕೊರೊನಾ ಕಾರಣಕ್ಕೆ ಸರಳ ಮೇಳಕ್ಕೆ ಯೋಜನೆ ರೂಪಿಸಿದ್ದು, ಮೇಳದ ವೀಕ್ಷಣೆಗೆ ಪ್ರತಿದಿನ 200 ಮಂದಿಗೆ ಮಾತ್ರ ಅವಕಾಶ ನೀಡುತ್ತೇವೆ. ಮೇಳಕ್ಕೆ 18ರಿಂದ 60 ವರ್ಷದೊಳಗಿನವರಿಗೆ ಮಾತ್ರ ಅವಕಾಶ ನೀಡಿದ್ದು, ಜಿಕೆವಿಕೆ ಪ್ರವೇಶದ್ವಾರದಿಂದ ಸಭಾಂಗಣಕ್ಕೆ ತಲುಪಲು ಸಾರಿಗೆ ವ್ಯವಸ್ಥೆ ಇರಲಿದೆ. ಮೇಳಕ್ಕೆ ಬರುವವರಿಗೆ ಮಾಸ್ಕ್ ಕಡ್ಡಾಯ' ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.