
ಬೆಂಗಳೂರು: ಪತ್ನಿಗೆ (ಡಾ.ಕೃತಿಕಾ ರೆಡ್ಡಿ) ಅನಸ್ತೇಶಿಯಾ ನೀಡಿ ಕೊಂದ ಆರೋಪ ಎದುರಿಸುತ್ತಿರುವ ಪತಿ ಡಾ. ಜಿ.ಎಸ್.ಮಹೇಂದ್ರ ರೆಡ್ಡಿ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಲಾಗಿದೆ.
ಈ ನೇಮಕ ಕುರಿತಂತೆ ರಾಜ್ಯ ಗೃಹ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ಸಿಬಿಐ ಮತ್ತು ಎನ್ಐಎ ಪ್ರಾಸಿಕ್ಯೂಟರ್ ಕೂಡಾ ಆಗಿರುವ ಪಿ.ಪ್ರಸನ್ನ ಕುಮಾರ್, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲೂ ವಿಶೇಷ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು. ಪತಿ ಮಹೇಂದ್ರ ರೆಡ್ಡಿ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ. ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಹಿರಿಯರ ಸಮ್ಮುಖದಲ್ಲಿ 2024ರ ಮೇ 24ರಂದು ಮದುವೆಯಾಗಿದ್ದರು. ‘ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ’ ಎಂದು ಮಹೇಂದ್ರ ರೆಡ್ಡಿ 2024ರ ಏಪ್ರಿಲ್ 23ರಂದು ಕೃತಿಕಾಗೆ ಹೆಚ್ಚುವರಿ ಅನಸ್ತೇಶಿಯಾ ನೀಡಿದ ಕಾರಣ ಕೋಮಾ ಸ್ಥಿತಿ ತಲುಪಿದ್ದರು.
ಕೃತಿಕಾ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಮೃತಪಟ್ಟಿದ್ದರು. ಮೃತರ ಪೋಷಕರು, ‘ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ’ ಎಂದು ನೀಡಿದ್ದ ವಿವರಣೆ ಅನುಸಾರ ಯುಡಿಆರ್ (ಅಸ್ವಾಭಾವಿಕ ಸಾವು) ದಾಖಲಾಗಿತ್ತು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ಬಂದ ನಂತರ, ‘ಅನಸ್ತೇಶಿಯಾದ ಪ್ರಮಾಣ ಹೆಚ್ಚಾದ ಕಾರಣ ಸಾವು ಸಂಭವಿಸಿದೆ’ ಎಂಬುದು ತಿಳಿದು ಬಂದಿತ್ತು.
ಈ ಸಂಬಂಧ ಕೃತಿಕಾ ತಂದೆ ಕೆ.ಮುನಿರೆಡ್ಡಿ ನೀಡಿದ ದೂರಿನ ಅನುಸಾರ ಪೊಲೀಸರು ವರ್ತೂರಿನ ಗುಂಜೂರು ನಿವಾಸಿ ಡಾ.ಮಹೇಂದ್ರ ರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹೇಂದ್ರ ರೆಡ್ಡಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.