ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿ ಶೈಲಶ್ರೀ (28) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆ ಸಂಬಂಧ ಶ್ರೀಕಂಠ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಮೃತ ಶೈಲಶ್ರೀ, ಮೇಡಹಳ್ಳಿಯ ಮಂಜುನಾಥ್ನಗರದಲ್ಲಿ ವಾಸವಿದ್ದರು. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಹೋಗಿದ್ದ ಆರೋಪಿ ಶ್ರೀಕಂಠ್, ಶೈಲಶ್ರೀ ಅವರ ಕುತ್ತಿಗೆಗೆ ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಫೈನಾನ್ಸ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶೈಲಶ್ರೀ, ಮೇಡಹಳ್ಳಿಯ ಹರ್ಷಾ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಹರ್ಷಾ ಅವರು ಈ ಮೊದಲೇ ಚೈತ್ರಾ ಎಂಬುವರನ್ನು ಮದುವೆಯಾಗಿದ್ದರು. ಎರಡನೇ ಮದುವೆ ವಿಷಯ ಬಯಲಾಗುತ್ತಿದ್ದಂತೆ ಚೈತ್ರಾ, ಹರ್ಷಾ ಜೊತೆ ಜಗಳ ಮಾಡಿದ್ದರು.’
‘ಸಹೋದರನೂ ಆಗಿರುವ ಆರೋಪಿ ಶ್ರೀಕಂಠ್ ಬಳಿ ಅಳಲು ತೋಡಿಕೊಂಡಿದ್ದ ಚೈತ್ರಾ, ‘ನನ್ನ ಪತಿ ತಲೆ ಕೆಡಿಸಿರುವ ಶೈಲಶ್ರೀ, ಆತನನ್ನು ಮದುವೆ ಮಾಡಿಕೊಂಡಿದ್ದಾಳೆ. ಆಕೆಯಿಂದ ಪತಿ ಮನೆಗೂ ಬರುತ್ತಿಲ್ಲ. ನನ್ನ ಜೊತೆ ಸಂಸಾರ ಮಾಡುತ್ತಿಲ್ಲ. ನನ್ನ ಜೀವನ ಹಾಳಾಯಿತು’ ಎಂದಿದ್ದರು. ಅದರಿಂದ ಸಿಟ್ಟಾಗಿದ್ದ ಶ್ರೀಕಂಠ್, ಶೈಲಶ್ರೀ ಅವರನ್ನು ಕೊಂದರೆ ಅಕ್ಕ ಚೈತ್ರಾ ಭವಿಷ್ಯ ಚೆನ್ನಾಗಿರುತ್ತೆ ಎಂದು ತಿಳಿದು ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.