ಬೆಂಗಳೂರು: ಕೆ.ಆರ್.ಪುರ ಸಮೀಪದ ಐಟಿಐ ಬಸ್ ತಂಗುದಾಣದಲ್ಲಿ ರಾಮಕೇಶ್ ಮಾಲಿ (26) ಎಂಬುವರು ರಕ್ತದ ವಾಂತಿ ಮಾಡಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ರಾಜಸ್ಥಾನದ ರಾಮಕೇಶ್,ಮುಳಬಾಗಿಲು ಸಮೀಪದ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಯಸ್ಥರ ಜೊತೆಯಲ್ಲಿ ವಾಸವಿದ್ದರು.
‘ಅನಾರೋಗ್ಯದಿಂದ ಬಳಲುತ್ತಿದ್ದ ರಾಮಕೇಶ್ ಅವರಿಗೆ ಚಿಕಿತ್ಸೆ ಕೊಡಿಸಲೆಂದು ಕಾರ್ಖಾನೆಯ ಮೇಸ್ತ್ರಿ ಮೋಹನ್ ಅವರು ಅ. 24ರಂದು ಕೆ.ಆರ್.ಪುರಕ್ಕೆ ಕರೆದುಕೊಂಡು ಬಂದಿದ್ದರು. ಬಸ್ ಇಳಿದು ತಂಗುದಾಣಕ್ಕೆ ಹೋಗುತ್ತಿರುವಾಗಲೇ ಕುಸಿದು ಬಿದ್ದಿದ್ದ ರಾಮಕೇಶ್, ರಕ್ತದ ವಾಂತಿ ಮಾಡಿಕೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
‘ಸಾವಿನ ಬಗ್ಗೆ ದೂರು ನೀಡಿರುವ ಸಹೋದರ ರಾಜೇಂದ್ರ, ‘ರಾಮಕೇಶ್ ಜೊತೆ ವಾಸವಿದ್ದ ಪರಿಚಯಸ್ಥರೇ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅದರಿಂದ ತೀವ್ರ ಗಾಯಗೊಂಡು ರಾಮಕೇಶ್ ಮೃತಪಟ್ಟಿದ್ದಾನೆ. ಇದೊಂದು ಕೊಲೆ' ಎಂಬುದಾಗಿ ಆರೋಪಿಸಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.