
ಕೆ.ಆರ್.ಪುರ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾಗಿದ್ದ ಜಮೀನಿನಲ್ಲಿ ಕೆಲವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದು ಮೂಲ ಮಾಲೀಕರಿಗೆ ಹಸ್ತಾಂತರಿಸಿದರು.
ಕೆ.ಆರ್.ಪುರ ಹೋಬಳಿಯ ಬಸವನಪುರ ಗ್ರಾಮದ ಸರ್ವೆ ನಂಬರ್ 25/1ರಲ್ಲಿ 35 ಗುಂಟೆ ಜಮೀನಿನಲ್ಲಿ 40 ಮನೆಗಳು ನಿರ್ಮಾಣ ಮಾಡಿಕೊಂಡಿರುವ ಮನೆ ಮಾಲೀಕರು ಮೂಲ ವಾರಸುದಾರರಿಗೆ ಮಾರುಕಟ್ಟೆ ಮೌಲ್ಯ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಉಪ ತಹಶೀಲ್ದಾರ್ ಸರಸವಾಣಿ ನೇತೃತ್ವದಲ್ಲಿ ಸ್ವಾಧೀನ ಬಿಡಿಸಿ ಮೂಲ ವಾರಸುದಾರರಿಗೆ ಜಮೀನು ನೀಡಲಾಯಿತು.
ಸರಸವಾಣಿ ಮಾತನಾಡಿ, ‘ಪೂರ್ವ ತಾಲ್ಲೂಕು ತಹಶೀಲ್ದಾರ್ ಮತ್ತು ಉತ್ತರ ಉಪ ವಿಭಾಗಾಧಿಕಾರಿ ಸೂಚನೆ ಮೇರೆಗೆ 40 ಮನೆಗಳ ಪೈಕಿ 22 ಸ್ವತ್ತುಗಳಿಗೆ ಬೀಗ ಹಾಕಿ, ಸ್ವತ್ತುಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಉಳಿದ 18 ಮನೆಯ ವಾರಸುದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕೆಲವರಿಗೆ ಕೋರ್ಟ್ ಆದೇಶದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ವಾರದೊಳಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.