ADVERTISEMENT

ಮೆಜೆಸ್ಟಿಕ್‌ನಲ್ಲಿ ಸರಣಿ ಅಪಘಾತ; ಕೆಎಸ್‌ಆರ್‌ಟಿಸಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಮೆಜೆಸ್ಟಿಕ್ ಕೇಂದ್ರ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಚಾಲಕ ನಿಂಗಪ್ಪ (45) ಮೃತಪಟ್ಟಿದ್ದಾರೆ.

‘ಗುರುವಾರ ಬೆಳಿಗ್ಗೆ 4.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಿರ್ಲಕ್ಷ್ಯದ ಚಾಲನೆ ಮಾಡಿ ಸಾವಿಗೆ ಕಾರಣರಾದ ಆರೋಪದಡಿ ಚಾಲಕ ಹನುಮಂತಪ್ಪ ಎಂಬುವರನ್ನು ಬಂಧಿಸಲಾಗಿದೆ’ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ಮೂಲಗಳು ಹೇಳಿವೆ.

‘ಚಾಲಕ ನಿಂಗಪ್ಪ, ಅತ್ತಿಬೆಲೆಯಿಂದ ಬಸ್‌ ಚಲಾಯಿಸಿಕೊಂಡು ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಂದು ಪ್ರವೇಶ ದ್ವಾರದ ಬಳಿ ಪ್ರಯಾಣಿಕರನ್ನು ಇಳಿಸಿದ್ದರು. ನಂತರ, ಮೂತ್ರ ವಿಸರ್ಜನೆಗೆಂದು ಶೌಚಾಲಯದತ್ತ ನಡೆದುಕೊಂಡು ಹೊರಟಿದ್ದರು.’

ADVERTISEMENT

‘ಅದೇ ಸಂದರ್ಭದಲ್ಲಿ ಗಂಗಾವತಿ ಡಿಪೊದ ಬಸ್‌ ಪ್ರವೇಶ ದ್ವಾರದಲ್ಲಿ ಬಂದಿತ್ತು. ಅದರ ಹಿಂದೆಯೇ ವೇಗವಾಗಿ ಐರಾವತ್ ಬಸ್ (ದಾವಣಗೆರೆ ಡಿಪೊ) ಚಲಾಯಿಸಿಕೊಂಡು ಬಂದಿದ್ದ ಆರೋಪಿ ಹನುಮಂತಪ್ಪ, ನಿಯಂತ್ರಣ ಕಳೆದುಕೊಂಡು ಗಂಗಾವತಿ ಡಿಪೊ ಬಸ್‌ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದರು. ಸ್ಟೇರಿಂಗ್ ಪಕ್ಕಕ್ಕೆ ಎಳೆದರೂ ನಿಯಂತ್ರಣಕ್ಕೆ ಸಿಗದ ಐರಾವತ್ ಬಸ್, ರಸ್ತೆಯಲ್ಲಿ ಹೊರಟಿದ್ದ ನಿಂಗಪ್ಪ ಅವರಿಗೆ ಗುದ್ದಿತ್ತು. ಆನೇಕಲ್‌ ಬಸ್ಸಿಗೂ ಡಿಕ್ಕಿ ಹೊಡೆದಿತ್ತು. ಅದೇ ಬಸ್ ಬಳಿ ನಡೆದುಕೊಂಡು ಹೊರಟಿದ್ದ ಜಾರ್ಖಂಡ್‌ನ ರಂಜಿತ್‌ಕುಮಾರ್ ಎಂಬುವರಿಗೂ ತೀವ್ರ ಗಾಯವಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘ತಲೆ ಹಾಗೂ ಕೈಗೆ ತೀವ್ರ ಪೆಟ್ಟು ಬಿದ್ದು ಚಾಲಕ ನಿಂಗಪ್ಪ ಮೃತಪಟ್ಟಿದ್ದಾರೆ. ಗಾಯಾಳು ರಂಜಿತ್‌ಕುಮಾರ್ ಅವರ ಎರಡು ಕಾಲುಗಳು ತುಂಡಾಗಿವೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.