ಬೆಂಗಳೂರು:ರಾಜ್ಯ ಸರ್ಕಾರವು ‘ನೂತನ ಸಮಗ್ರ ಪ್ರದೇಶ ಯೋಜನೆ’ಯ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರನ್ವಯ, ರಾಜ್ಯ ರಸ್ತೆ ನಿಗಮದ ಬಸ್ಗಳು ಮಾತ್ರ ಪ್ರಯಾಣಿಕ ಸೇವೆಯನ್ನು ನೀಡಲಿವೆ. ಕರ್ನಾಟಕದಾದ್ಯಂತ ಈ ನಿಯಮ ಅನ್ವಯವಾಗಲಿದೆ. ಆದರೆ, ಈಗಾಗಲೇ ಪ್ರಯಾಣಿಕ ಸೇವೆ ನೀಡುವ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳಿಗೆ ಇದು ಅನ್ವಯವಾಗದು.
2017ರ ಸೆ. 28ರಿಂದ ಅನ್ವಯವಾಗುವಂತೆ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳು ಪ್ರಯಾಣಿಕ ಸೇವೆ ನೀಡಬಹುದು. ಆದರೆ, ಇನ್ನು ಮುಂದೆ ಖಾಸಗಿ ಸಂಸ್ಥೆಗಳಿಗೆ ಪ್ರಯಾಣಿಕ ಸೇವೆಗೆ ಹೊಸ ಪರವಾನಗಿ ನೀಡ ಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿದೆ.
ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ, 2016ರಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಬಲಪಡಿಸುವುದು ಮತ್ತು ನೂತನ ಮೋಟಾರು ವಾಹನ ಕಾಯ್ದೆಯ ಪರಿಣಾಮಗಳಿಂದ ಇವುಗಳನ್ನು ಪಾರು ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಅವರು ಮುಂದಾಗಿದ್ದರು.
‘ದಕ್ಷಿಣ ಭಾರತದ ರಾಜ್ಯಗಳು ಸಾರಿಗೆ ನಿಗಮಗಳು ಈ ನೀತಿ ಅಳವಡಿಸಿ ಕೊಂಡು ಲಾಭದಲ್ಲಿ ನಡೆಯುತ್ತಿವೆ. ಹೊಸ ಕಾಯ್ದೆ ಜಾರಿಗೆ ಬಂದರೆ, ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಸ್ಪರ್ಧೆ ಹೆಚ್ಚಲಿದೆ ಮತ್ತು ಇದರಿಂದ ಲಕ್ಷಾಂತರ ಜನರ ಮೇಲೆ ಪರಿಣಾಮವಾಗಲಿದೆ. ಈ ನಿಟ್ಟಿನಿಂದ ಪ್ರಯಾಣಿಕ ಸೇವೆಗಳನ್ನು ರಾಜ್ಯ ಸಾರಿಗೆ ನಿಗಮಗಳು ಮಾತ್ರ ನೀಡುವುದು ಉತ್ತಮ’ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.