ಬೆಂಗಳೂರು: ಬಾಗಲೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ಗೆ ಕಟ್ಟಿದ್ದ ಮರದ ತುಂಡು ಮುರಿದಿದ್ದರಿಂದಕಾರ್ಮಿಕರೊಬ್ಬರು ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಅಸ್ಸಾಂನ ಕೋಸಾವೊ (24) ಮೃತರು. ಅವಘಡದಲ್ಲಿ ಕಾರ್ಮಿಕ ಅಬ್ದುಲ್ ಜಾಕೀಲ್ (27) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಾಗಲೂರು ಪೊಲೀಸರು, ನಿರ್ಲಕ್ಷ್ಯ ಆರೋಪದಡಿ ಗುತ್ತಿಗೆದಾರ ಮುನಿಸ್ವಾಮಿ ಎಂಬುವರನ್ನು ಬಂಧಿಸಿದ್ದಾರೆ.
‘ಡೆಲ್ಲಿ ಪಬ್ಲಿಕ್ ಶಾಲೆ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಫ್ಯಾಬ್ರಿಕೇಷನ್ ಕೆಲಸ ನಡೆಯುತ್ತಿದೆ. ಕಟ್ಟಡದ ಸುತ್ತಲೂ ಮರದ ತುಂಡುಗಳನ್ನು ಕಟ್ಟಲಾಗಿದೆ. ತುಂಡುಗಳ ಮೇಲೆ ನಿಂತು ಕಾರ್ಮಿಕರು ಶನಿವಾರ ಕೆಲಸ ಮಾಡುತ್ತಿದ್ದಾಗಲೇ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಸಂಜೆ 5 ಗಂಟೆ ಸುಮಾರಿಗೆ ತುಂಡುಗಳು ಮುರಿದಿದ್ದರಿಂದ, ಇಬ್ಬರೂ ಕಾರ್ಮಿಕರು ಕಟ್ಟಡದಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನೂ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೋಸಾವೊ ಅಸುನೀಗಿದ್ದಾರೆ. ಘಟನೆ ಸಂಬಂಧ ಗಾಯಾಳು ಅಬ್ದುಲ್ ಅವರ ಹೇಳಿಕೆ ಪಡೆಯಲಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.