ADVERTISEMENT

ಬೆಂಗಳೂರು: ಪಾಯ ಕುಸಿತ, ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 16:28 IST
Last Updated 25 ಡಿಸೆಂಬರ್ 2023, 16:28 IST
   

ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣಕ್ಕಾಗಿ ತೊಡಲಾಗುತ್ತಿದ್ದ ಪಾಯದ ಮಣ್ಣು ಕುಸಿದು ಕಾರ್ಮಿಕ ರಂಜನ್‌ಕುಮಾರ್ ಅವರು ಮೃತಪಟ್ಟಿದ್ದಾರೆ.

‘ಬಿಹಾರದ ರಂಜನ್‌ಕುಮಾರ್, ಕೆಲಸ ಹುಡುಕಿಕೊಂಡು ಹಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಸ್ನೇಹಿತರ ಜೊತೆ ವಾಸವಿದ್ದರು. ಮಣ್ಣಿನಡಿ ಸಿಲುಕಿದ್ದ ಇನ್ನೊಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜೆಸಿಬಿ ಯಂತ್ರದಿಂದ ಪಾಯ ಅಗೆಯಲಾಗುತ್ತಿತ್ತು. ರಂಜನ್ ಹಾಗೂ ಇತರೆ ಕಾರ್ಮಿಕರು, ಪಾಯವನ್ನು ಸಮತಟ್ಟಾಗಿ ಮಾಡಿ ಮಣ್ಣು ತೆಗೆಯುತ್ತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಕೆಲಸದ ಸಂದರ್ಭದಲ್ಲಿ ಪಕ್ಕದ ಕಟ್ಟಡಕ್ಕೆ ಜೆಸಿಬಿ ಯಂತ್ರದ ಬಕೆಟ್ ತಾಗಿತ್ತು. ಇದರಿಂದಾಗಿ ಜೆಸಿಬಿ ಯಂತ್ರ ಅಲುಗಾಡಿತ್ತು. ಅದರ ಒತ್ತಡಕ್ಕೆ ಪಾಯದ ಅಕ್ಕ– ಪಕ್ಕದಲ್ಲಿದ್ದ ಮಣ್ಣು ಕುಸಿದು, ಇಬ್ಬರು ಕಾರ್ಮಿಕರ ಮೇಲೆ ಬಿದ್ದಿತ್ತು.’

ADVERTISEMENT

‘ಸಹ ಕಾರ್ಮಿಕರು ಹಾಗೂ ಸ್ಥಳೀಯರು ರಕ್ಷಣೆಗೆ ಹೋಗಿದ್ದರು. ಪಾಯದ ಮಣ್ಣು ತೆಗೆದು ಒಬ್ಬ ಕಾರ್ಮಿಕರನ್ನು ರಕ್ಷಿಸಿದ್ದರು. ರಂಜನ್‌ಕುಮಾರ್ ಮಾತ್ರ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು’ ಎಂದು ತಿಳಿಸಿದರು.

‘ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ನಿವೇಶನ ಮಾಲೀಕ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.