ಬೆಂಗಳೂರು: ಏರ್ಯ ಆಳ್ವ ಫೌಂಡೇಷನ್ ನೀಡುವ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಗೌರವ ಪ್ರಶಸ್ತಿ’ಗೆ ಸಾಹಿತಿ ನಾ. ದಾಮೋದರ ಶೆಟ್ಟಿ ಹಾಗೂ ಜಾನಪದ ವಿದ್ವಾಂಸ ಕೆ. ಚಿನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ತಲಾ ₹1 ಲಕ್ಷ ಒಳಗೊಂಡಿದೆ. ಕರಾವಳಿಯ ಸಾಹಿತಿ ಹಾಗೂ ಸಹಕಾರಿ ಸಂಘಗಳ ನೇತಾರರಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಶಸ್ತಿ ನೀಡಲಾಗುತ್ತಿದೆ.
ಇದೇ 28ರಂದು ಮಂಗಳೂರಿನ ಬಂಟ್ವಾಳ ಸಮೀಪದ ಏರ್ಯಬೀಡು ತರವಾಡು ಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಹಂಪ ನಾಗರಾಜಯ್ಯ ಅವರು ಅಧ್ಯಕ್ಷತೆ ವಹಿಸುತ್ತಾರೆ. ಆನಂದಿ ಎಲ್. ಆಳ್ವ ಅವರು ಸಮಾರಂಭ ಉದ್ಘಾಟಿಸುತ್ತಾರೆ.
ನಾ. ದಾಮೋದರ ಶೆಟ್ಟಿ ಅವರು ಸಂಪಾದಿಸಿರುವ ‘ಏರ್ಯ ಸಾಹಿತ್ಯ ಮರುಚಿಂತನ’ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಬಿ.ಎ. ವಿವೇಕ ರೈ ಅವರು ಜನಾರ್ಪಣೆ ಮಾಡಲಿದ್ದಾರೆ ಎಂದು ಫೌಂಡೇಷನ್ ಅಧ್ಯಕ್ಷ ಏರ್ಯ ಬಾಲಕೃಷ್ಣ ಹೆಗ್ಡೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.