
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕ್ಯಾಮೆರಾ ಹಿಡಿದು ನಿಂತಿರುವ ಕಲಾಕೃತಿಯನ್ನು ಕೆ.ಪಿ. ಈಶಾನ್ಯೆ, ಇಬ್ರಾಹಿಂ ಮೈಗೂರು, ಎಂ. ಜಗದೀಶ್ ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ತೆಂಗಿನ ಗರಿಗಳಲ್ಲಿ ಅರಳಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀಪು, ಸ್ಕೂಟರ್, ತರಕಾರಿಗಳಿಂದ ಮಾಡಿದ ನವಿಲು, ಹಂಸ, ‘ನಿರುತ್ತರ’ದ ಮನೆ ನೋಡುಗರ ಮನಸೂರೆಗೊಂಡವು.
‘ತೇಜಸ್ವಿ ವಿಸ್ಮಯ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಆಯೋಜಿಸಿರುವ ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್ ಜಾನೂರು ಮತ್ತು ಬೋನ್ಸಾಯ್ ಗಿಡಗಳ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು.
ಈ ಪ್ರದರ್ಶನಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪುತ್ರಿ ಕೆ.ಪಿ. ಈಶಾನ್ಯೆ ಶನಿವಾರ ಚಾಲನೆ ನೀಡಿದರು. ಇಕೆಬಾನ ಹೂಗಳ ಪ್ರದರ್ಶನ ಚಿತ್ತಾಕರ್ಷಕವಾಗಿತ್ತು. ಜನರು ತಮ್ಮ ಇಷ್ಟದ ಪ್ರದರ್ಶನಗಳ ಎದುರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು.
ತೇಜಸ್ವಿ ಅವರು ಕ್ಯಾಮೆರಾ ಹಿಡಿದುಕೊಂಡು ನಿಂತಿರುವ ಮಾದರಿಯನ್ನು ಬಾಳೆ ಎಲೆಯಲ್ಲಿ ಅದ್ಭುತವಾಗಿ ರಚಿಸಲಾಗಿದೆ. ಸಾರ್ವಜನಿಕರು ಇದರ ಮುಂಭಾಗದಲ್ಲಿ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ತೆಂಗಿನ ಗರಿಗಳಲ್ಲಿ ರಚಿಸಿದ ಆಮೆಯ ಮಾದರಿಗಳು ನೋಡಗರ ಗಮನ ಸೆಳೆದವು. ಇದರ ಜೊತೆಗೆ ಡಚ್ ಹೂವಿನ ಜೋಡಣೆ, ಬೋನ್ಸಾಯ್ ಗಿಡಗಳ ಪ್ರದರ್ಶನ ಆಕರ್ಷಕವಾಗಿತ್ತು. ತೆಂಗಿನ ಗರಿಗಳಲ್ಲಿ ಮೂಡಗೆರೆಯ ವಾತಾವರಣವನ್ನು ರೂಪಿಸಿದ ಮಾದರಿ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ತೋಟಗಾರಿಕೆ ಇಲಾಖೆಯ ನಿರ್ದೇಶಕ ಇಬ್ರಾಹಿಂ ಮೈಗೂರು ಉಪಸ್ಥಿತರಿದ್ದರು.
ಲಾಲ್ಬಾಗ್ನ ಗಾಜಿನ ಮನೆಯಲ್ಲಿ ನಡೆಯುತ್ತಿರುವ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಶನಿವಾರ 49721 ಜನ ಭೇಟಿ ನೀಡಿದ್ದು ₹17.60 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.