ADVERTISEMENT

ಅನುದಾನದ ಕೊರತೆಯಿಂದ ಸೊರಗುತ್ತಿದೆ ಲಾಲ್‌ಬಾಗ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:26 IST
Last Updated 17 ನವೆಂಬರ್ 2022, 4:26 IST

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯ ಪ್ರೇಮಿಗಳ ನೆಚ್ಚಿನ ತಾಣ, ವಾಯುವಿಹಾರಿಗಳ ಸ್ವರ್ಗ ಲಾಲ್‌ಬಾಗ್‌ನಲ್ಲಿ ಸಾಲು ಸಾಲು ಸಮಸ್ಯೆಗಳಿದ್ದು, ಅನುದಾನದ ಮತ್ತು ಸಿಬ್ಬಂದಿಯ ಕೊರತೆಯೇ ಇದಕ್ಕೆ ಕಾರಣ ಎಂದು ವಾಯುವಿಹಾರಿಗಳೇ ತಿಳಿಸಿದ್ದಾರೆ.

‘ಸರ್ಕಾರದ ಅನುದಾನದ ಕೊರತೆ ಮತ್ತು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಅವರ ನಿರ್ಲಕ್ಷ್ಯದಿಂದ ಸಸ್ಯತೋಟ ಸೊರಗುತ್ತಿದೆ. ರಸ್ತೆ, ಪಾದಚಾರಿ ಮಾರ್ಗ, ದಾಸವಾಳ ವನದಲ್ಲಿ ಕೊಳಚೆ ನೀರು ತುಂಬಿಕೊಂಡಿದೆ’ ಎಂದು ಸಿದ್ಧಾಪುರದ ನಿವಾಸಿ ಸುಬ್ರಹ್ಮಣ್ಯಸ್ವಾಮಿ ಆರೋಪಿಸಿದರು.

‘240 ಎಕರೆ ಹರಡಿಕೊಂಡಿರುವ ಸಸ್ಯಕಾಶಿಯಲ್ಲಿ ಸತತ ಮಳೆಯಿಂದ ಅವ್ಯವಸ್ಥೆ ಸೃಷ್ಟಿಯಾಗಿದೆ. ಸರ್ಕಾರ ಅನುದಾನ ಬಿಡುಗಡೆಗೊಳಿಸಿ ಇದರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸತತವಾಗಿ ಸುರಿದ ಮಳೆಯಿಂದ ಲಾಲ್‌ಬಾಗ್‌ನ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಅಧಿಕಾರಿಗಳು ಪರಿಶೀಲಿಸಿ ನಿರ್ವಹಣಾ ಕಾಮಗಾರಿ ಕೈಗೊಂಡಿದ್ದಾರೆ. ಲಾಲ್‌ಬಾಗ್‌ ಹಿಂದಿಗಿಂತಲೂ ಈಗ ಸ್ವಚ್ಛ, ಸುಂದರವಾಗಿ ಕಾಣುತ್ತಿದೆ’ ಎಂದು ಸಿದ್ದಾಪುರದ ನಿವಾಸಿ ಸುರೇಶ್ ಎಸ್.ಎಂ. ಅಭಿಪ್ರಾಯ ವ್ಯಕ್ತಪಡಿಸಿದರು.

‘ಲಾಲ್‌ಬಾಗ್‌ ಸಸ್ಯಕಾಶಿಯನ್ನು ನವದೆಹಲಿಯ ನೆಹರೂ ಪಾರ್ಕ್‌ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಉದ್ಯಾನದಲ್ಲಿ ದೂಳು ಮತ್ತು ನೀರು ನಿರೋಧಕ ಸಿಂಥೆಟಿಕ್ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು. ಇದರ ನಿರ್ವಹಣೆಯೂ ಸುಲಭವಾಗಿದೆ’ ಎಂದು ಲಾಲ್‌ಬಾಗ್‌ ಹಾಪ್‌ಕಾಮ್ಸ್‌ ಅಧ್ಯಕ್ಷ ಎಂ ಬಾಬು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.