ADVERTISEMENT

ಲಾಲ್‌ಬಾಗ್‌: ಅಳಿದ ಮರಗಳಿಂದ ಕಾಷ್ಠಶಿಲ್ಪ ಕಲಾಕೃತಿ

ಲಾಲ್‌ಬಾಗ್‌ನಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಮರಗೆತ್ತನೆ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 19:36 IST
Last Updated 3 ಜನವರಿ 2026, 19:36 IST
ಲಾಲ್‌ಬಾಗ್‌ನಲ್ಲಿ ಶುಕ್ರವಾರ ಮರಗೆತ್ತನೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಅ.ನ. ಯಲ್ಲಪ್ಪ‍ರೆಡ್ಡಿ, ಎಂ.ಸಿ. ರಮೇಶ್‌, ಪಿ.ಎಸ್‌. ಕುಮಾರ್‌, ಜಗದೀಶ್‌ ಉಪಸ್ಥಿತರಿದ್ದರು
ಲಾಲ್‌ಬಾಗ್‌ನಲ್ಲಿ ಶುಕ್ರವಾರ ಮರಗೆತ್ತನೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಅ.ನ. ಯಲ್ಲಪ್ಪ‍ರೆಡ್ಡಿ, ಎಂ.ಸಿ. ರಮೇಶ್‌, ಪಿ.ಎಸ್‌. ಕುಮಾರ್‌, ಜಗದೀಶ್‌ ಉಪಸ್ಥಿತರಿದ್ದರು   

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಏಳು ವರ್ಷದಿಂದ ಮಳೆ–ಗಾಳಿ, ವಯಸ್ಸಾಗಿ ಧರೆಗುರುಳಿದ ಮರಗಳಿಂದ ಪರಿಸರಸ್ನೇಹಿ ‘ಕಾಷ್ಠಶಿಲ್ಪ ಕಲಾಕೃತಿ’ಗಳನ್ನು ರಚಿಸಿ, ‘ಮರ ಸಂಗ್ರಹಾಲಯ’ದಲ್ಲಿರಿಸುವ 14 ದಿನಗಳ ಶಿಬಿರ ಶುಕ್ರವಾರ ಆರಂಭವಾಯಿತು.

ತೋಟಗಾರಿಕೆ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ‘2ನೇ ರಾಷ್ಟ್ರೀಯ ಮರಗೆತ್ತನೆ ಶಿಬಿರ’ದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮುಂಬೈ, ಛತ್ತೀಸಗಢದಿಂದ 50 ಪರಿಣತ ಶಿಲ್ಪಿಗಳು ಭಾಗವಹಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಉರುಳಿ ಬಿದ್ದ ಮಹಾಘನಿ, ನೀಲಗಿರಿ ಸೇರಿದಂತೆ 30ಕ್ಕೂ ಹೆಚ್ಚು ಬೃಹತ್‌ ಮರಗಳ ಕಾಂಡ, ರೆಂಬೆ-ಕೊಂಬೆಗಳನ್ನು ಸಂಗ್ರಹಿಸಿಡಲಾಗಿದೆ. ಮರಗೆತ್ತನೆ ಶಿಬಿರದಿಂದ ಶಿಲ್ಪಿಗಳು ಮರಗಳ ಮೇಲೆ ಆಕರ್ಷಕ ಆಕೃತಿಗಳನ್ನು ರಚಿಸಲಿದ್ದು, ಅವುಗಳನ್ನು ಮರ ಸಂಗ್ರಹಾಲಯಕ್ಕೆ (ವುಡ್‌ ಮ್ಯೂಸಿಯಂ) ಸೇರಿಸಲಾಗುತ್ತದೆ.

ADVERTISEMENT

ಬ್ರಿಟಿಷರ ಕಾಲದಲ್ಲಿ ಪರಿಚಯವಾದ ನೀಲಗಿರಿ, ಮಹಾಘನಿ, ಅಕೇಶಿಯಾದ ಎಂಟು ಬೃಹತ್‌ ಮರಗಳಿದ್ದು, ಅವುಗಳ ಮೇಲೆ 35  ಕಲಾಕೃತಿಗಳನ್ನು ರಚಿಸಲಾಗುತ್ತದೆ. ಜನವರಿ 17ರವರೆಗೆ ಶಿಬಿರ ನಡೆಯಲಿದ್ದು, ಕಲಾಕೃತಿ ನಿರ್ಮಿಸುವ ಜವಾಬ್ದಾರಿಯನ್ನು ಒಂದು ತಂಡಕ್ಕೆ ವಹಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದರು.

‘ದೇಶದ ಮೊದಲ ‘ವುಡ್ ಮ್ಯೂಸಿಯಂ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಾಲ್‌ಬಾಗ್‌ನಲ್ಲಿ  2018ರಲ್ಲಿ ಮೊದಲ ಮರಗೆತ್ತನೆ ಶಿಬಿರವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಬೃಹತ್‌ ಗಾತ್ರದ ಕಾಷ್ಠಶಿಲ್ಪಗಳನ್ನು ವಿನ್ಯಾಸಗೊಳಿಸಿ, ಗಾಜಿನ ಮನೆಯ ಹಿಂಭಾಗದಲ್ಲಿರುವ ಸಂಗ್ರಹಾಲಯದಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದರು.

ಕಲ್ಲಿನ ಕಲಾಕೃತಿಗಳನ್ನು ರಚಿಸಲು, ಎಚ್.ಡಿ. ಕೋಟೆಯಿಂದ ಸುಮಾರು ಐದು ಟನ್‌ ತೂಕದ ಎರಡು ‘ಸೋಕ್ ಸ್ಟೋನ್‌’ ತರಿಸಲಾಗಿದೆ. ಸಸ್ಯಕಾಶಿಯ ಪರಿಕಲ್ಪನೆಯಡಿ ಕಲಾಕೃತಿಗಳನ್ನು ರಚಿಸಲಾಗುತ್ತದೆ ಎಂದರು.

ನೂರಾರು ವರ್ಷ ಬಾಳಿಕೆ ಬರುವ ಕಲಾಕೃತಿಗಳನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಲು ಈ ಶಿಬಿರ ಸಹಕಾರಿಯಾಗಲಿದೆ. ತೋಟಗಾರಿಕೆ ಇಲಾಖೆಯಿಂದ ಸುಮಾರು ₹15 ಲಕ್ಷ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ  ಸುಮಾರು ₹7.50 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಎಂ. ಜಗದೀಶ್ ತಿಳಿಸಿದರು.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್, ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್. ಪಾಟೀಲ, ಉಪ ನಿರ್ದೇಶಕ ಎಚ್.ಟಿ. ಬಾಲಕೃಷ್ಣ, ಪರಿಸರ ತಜ್ಞ ಅ.ನ. ಯಲ್ಲಪ್ಪರೆಡ್ಡಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ರಮೇಶ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರು ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.