ADVERTISEMENT

₹ 37 ಕೋಟಿ ಮೌಲ್ಯದ ಭೂಮಿ ವಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 20:43 IST
Last Updated 21 ಸೆಪ್ಟೆಂಬರ್ 2019, 20:43 IST
ಬೆಂಗಳೂರು ನಗರ ಜಿಲ್ಲೆ ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಬೆಂಗಳೂರು ನಗರ ಜಿಲ್ಲೆ ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.   

ಬೆಂಗಳೂರು: ಜಿಲ್ಲಾಧಿಕಾರಿಜಿ.ಎನ್. ಶಿವಮೂರ್ತಿ ನಿರ್ದೇಶನದ ಮೇರೆಗೆ ಅಧಿಕಾರಿಗಳು ನಗರದ ವಿವಿಧೆಡೆ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ,₹ 37 ಕೋಟಿ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡರು.

ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಬೆಟ್ಟದಾಸನಪುರ ಗ್ರಾಮದ ಸರ್ವೆ ನಂ. 21ರ ಸರ್ಕಾರಿ ಮುಫತ್ ಕಾವಲು ಜಾಗ ಸೇರಿ ಒಟ್ಟು 25.02 ಎಕರೆ ಜಾಗ ಪರಿಶೀಲಿಸಿದರು. ಇದರಲ್ಲಿ 6 ಎಕರೆ ಪ್ರದೇಶ ಅತಿಕ್ರಮಣ ಆಗಿರುವುದು ಬೆಳಕಿಗೆ ಬಂದಿತು. ಈ ಜಾಗದಲ್ಲಿಶೀಟ್ ಮನೆಗಳು, ಗುಡಿಸಲುಗಳು, ಪಂಕ್ಚರ್ ಅಂಗಡಿ, ಸಲೂನ್ ಹಾಗೂ ಅನಧಿಕೃತ ವಸತಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿತ್ತು. ಜಾಗವನ್ನು ವಶಕ್ಕೆ ಪಡೆದ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಿದರು.

ಜೆಸಿಬಿ ಯಂತ್ರಗಳು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ ತಹಶೀಲ್ದಾರ್ ಶಿವಪ್ಪಲಮಾಣಿ, ಅಕ್ರಮ ವಾಸವಿದ್ದವರನ್ನು ವಿಚಾರಣೆಗೆ ಒಳಪಡಿಸಿದರು. ಬಾಡಿಗೆಗೆ ಇರುವವರು ಮನೆಯನ್ನು ಸ್ವಯಂ ತೆರವುಗೊಳಿಸಿದ್ದರಿಂದಖಾಲಿ ಇದ್ದ ಮನೆಗಳನ್ನು ಕೆಡವಲಾಯಿತು. ಅಕ್ರಮ ಬಡಾವಣೆಯನ್ನು ಸಮತಟ್ಟು ಮಾಡಲಾಯಿತು.

ADVERTISEMENT

ಬೇಗೂರು ಹೋಬಳಿಯ ಬೆಟ್ಟದಾಸನಪುರ ಗ್ರಾಮದ ಸರ್ವೆ ನಂ. 4ರ ಸರ್ಕಾರಿ ಕೆರೆ ಜಾಗ ಒಟ್ಟು 3.27 ಎಕರೆ ಇದ್ದು, ಇದರಲ್ಲಿ 0.3 ಎಕರೆ ಭೂಮಿಯನ್ನು ಷಣ್ಮುಖಪ್ಪ ಎಂಬುವವರು ಒತ್ತುವರಿ ಮಾಡಿ ಕೊಂಡಿದ್ದರು. ಅಲ್ಲಿ ನಿರ್ಮಿಸಿದ್ದ ಕೋಳಿ ಫಾರಂ ತೆರವುಗೊಳಿಸಲಾಯಿತು. ಬೆಂಗಳೂರು ನಗರ ಜಿಲ್ಲೆ ದಕ್ಷಿಣ ಉಪ ವಿಭಾಗದ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಜಿಲ್ಲೆಯ ವಿಭಾಗಾಧಿಕಾರಿಗಳು, ಬಿಎಂಟಿಎಫ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.