
ದಾಬಸ್ಪೇಟೆ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ತ್ಯಾಮಗೊಂಡ್ಲು ಹೋಬಳಿ ಹನುಮಂತಪುರದ, ಬಿದಲೂರು ಹಾಗೂ ಕೋಡಿಪಾಳ್ಯ ಗ್ರಾಮಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ದರ ನಿಗದಿ ಮಾಡುವ ಸಂಬಂಧ ಆಯೋಜಿಸಿದ್ದ ರೈತರ ಜೊತೆ ಸಭೆ ಗೊಂದಲದ ಗೂಡಾಯಿತು.
ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಮೀನಿನ ದರ ನಿಗದಿ ಸಂಬಂಧದ ಸಭೆಯಲ್ಲಿ ಮಾತನಾಡಿದ ರೈತರು, ‘ಭೂಮಿ ಖರೀದಿಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಧಿಕಾರಿಗಳು ತಡೆಯಾಜ್ಞೆ ಉಲ್ಲಂಘಿಸಿ ದರ ನಿಗದಿ ಮಾಡಲು ಬಂದಿದ್ದಾರೆ. ಈ ಸಂಬಂಧ ಪೂರ್ಣ ತೀರ್ಪು ಬರುವವರೆಗೆ ಯಾವುದೇ ಕಾರಣಕ್ಕೂ ದರ ನಿಗದಿ ಮಾಡಬಾರದು’ ಎಂದು ಆಗ್ರಹಿಸಿದರು
‘ಕೆಐಎಡಿಬಿ ಮಧ್ಯವರ್ತಿಗಳ ಜಾಲವಾಗಿ ಮಾರ್ಪಟ್ಟಿದೆ. ಅಲ್ಲಿನ ಕೆಲವು ಅಧಿಕಾರಿಗಳೇ ಕೆಐಎಡಿಬಿಗೆ ತಕರಾರು ಅರ್ಜಿ ಹಾಕುವಂತೆ ಮಾಡಿ, ಅದನ್ನು ಬಗೆಹರಿಸುವ ನೆಪದಲ್ಲಿ ರೈತರಿಂದ ಅತಿ ಹೆಚ್ಚು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ನಮ್ಮದೇ ಭೂಮಿಗಾಗಿ ಹಣ ಪಡೆಯಲು ಲಂಚ ಕೊಡಬೇಕಾಗಿದೆ’ ಎಂದು ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ನಾವು ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇವತ್ತು ನೀವು ಕೊಡುವ ಹಣಕ್ಕೆ ದಾಬಸ್ಪೇಟೆ ಪಟ್ಟಣದಲ್ಲಿ ಎರಡು ನಿವೇಶನ ಬರುವುದಿಲ್ಲ. ನಾವು ಭೂಮಿ ನೀಡಿ ಕೇವಲ 6 ತಿಂಗಳಿಗೆ ಬೀದಿಗೆ ಬರುತ್ತೇವೆ. ಒಳ್ಳೆಯ ಬೆಲೆ ಕೊಡಿ’ ಎಂದು ಆಗ್ರಹಿಸಿದರು.
‘ರೈತರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಕೆಲವು ರೈತರ ಜಮೀನುಗಳ ದರ ನಿಗದಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಾಲಯ ಉಲ್ಲೇಖಿಸಿರುವ ಸರ್ವೆ ನಂಬರ್ ಜಮೀನುಗಳನ್ನು ಹೊರತುಪಡಿಸಿ 386 ಎಕರೆಯಲ್ಲಿ 100 ಎಕರೆ ಜಮೀನಿಗೆ ದರ ನಿಗದಿಪಡಿಸಲಾಗುವುದು’ ಎಂದು ರಘುನಂದನ್ ತಿಳಿಸಿದರು.
‘ಹೈಕೋರ್ಟ್ ಸೂಚನೆ ನಂತರವೂ ಅಧಿಕಾರಿಗಳು ದರ ನಿಗದಿಗೆ ಬಂದಿರುವುದು ಸರಿಯಲ್ಲ. ನ.21ಕ್ಕೆ ನಡೆಯಲಿರುವ ವಿಚಾರಣೆ ವೇಳೆ ಇದನ್ನು ಹೈಕೋರ್ಟ್ ಗಮನಕ್ಕೆ ತರುತ್ತೇವೆ’ ಎಂದು ಕಾನೂನು ಹೋರಾಟ ನಡೆಸುತ್ತಿರುವ ವಿಜಯಕುಮಾರ್ ಸಹಿತ ಹಲವರು ಸಭೆಯಿಂದ ಹೊರ ನಡೆದರು.
ನಿಗದಿತ ದರ ಎಷ್ಟು?
ನೆಲಮಂಗಲ ತಾಲ್ಲೂಕು ವಿಶೇಷ ಭೂ ಸ್ವಾಧೀನಾಧಿಕಾರಿ ಶಿವೇಗೌಡ ‘ನಾವು ಭೂ ದರ ನಿಗದಿ ಮಾಡಲು ಬಂದಿದ್ದೇವೆ. ರಾಷ್ಟ್ರೀಯ ಹೆದ್ದಾರಿಗೆ 100 ಮೀಟರ್ ಅಂತರಕ್ಕೆ ಎಕರೆಗೆ ₹4.40 ಕೋಟಿ ಹನುಮಂತಪುರ ಗ್ರಾಮಕ್ಕೆ ₹2.25 ಕೋಟಿ ಹಾಗೂ ಬಿದಲೂರು/ ಕೋಡಿಪಾಳ್ಯ ಗ್ರಾಮಕ್ಕೆ ₹2.05 ಕೋಟಿ ನಿಗದಿಯಾಗಿದೆ’ ಎಂದು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.