
ಬೆಂಗಳೂರು: ಯಶವಂತಪುರ, ವರ್ತೂರು, ಜಿಗಣಿ, ಸರ್ಜಾಪುರ ಹೋಬಳಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು ₹68.61 ಕೋಟಿ ಮೌಲ್ಯದ 9 ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಶುಕ್ರವಾರ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಗೋಕಟ್ಟೆ, ಕುಂಟೆ, ಗೋಮಾಳ, ಖರಾಬು, ಕೆರೆ ಜಾಗಗಳನ್ನು ವಶಕ್ಕೆ ಪಡೆಯಿತು.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕಾಚೋಹಳ್ಳಿ ಗ್ರಾಮದ ಸರ್ವೆ ನಂಬರ್ 43ರ 1.20 ಎಕರೆ ಗೋಮಾಳ ತೆರವು ಮಾಡಿದ್ದು, ಇದರ ಅಂದಾಜು ಮೌಲ್ಯ ₹12 ಕೋಟಿ. ಇದಲ್ಲದೇ ಯಶವಂತಪುರ ಹೋಬಳಿಯ ಕಾಚೋಹಳ್ಳಿ ಗ್ರಾಮದ ಸ.ನಂ. 71ರ 6.08 ಎಕರೆ ಖರಾಬು ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಅಂದಾಜು ಮೌಲ್ಯ ₹50 ಕೋಟಿ.
ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕೊಡತಿ ಗ್ರಾಮದ ಸ.ನಂ.184ರಲ್ಲಿರುವ ಅಂದಾಜು ₹1.50 ಕೋಟಿ ಮೌಲ್ಯದ 5 ಗುಂಟೆ ಗೋಕಟ್ಟೆ ವಶಕ್ಕೆ ಪಡೆಯಲಾಗಿದೆ.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಎಸ್. ಮೇಡಹಳ್ಳಿ ಗ್ರಾಮದ ಸ.ನಂ.19ರ 8 ಗುಂಟೆ ಒತ್ತುವರಿ ತೆರವುಗೊಳಿಸಿದ್ದು, ಇದರ ಅಂದಾಜು ಮೌಲ್ಯ ₹40 ಲಕ್ಷ. ಜಿಗಣಿ ಹೋಬಳಿಯ ಮಹಾಂತಲಿಂಗಪುರ ಗ್ರಾಮದ ಸ.ನಂ.56ರ 10 ಗುಂಟೆ ಗೋಮಾಳ ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ₹46 ಲಕ್ಷವಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಅಜ್ಜನಹಳ್ಳಿ ಗ್ರಾಮದ ಸ.ನಂ. 111ರ 5 ಗುಂಟೆ ಖರಾಬು ಒತ್ತುವರಿ ತೆರವುಗೊಳಿಸಿದ್ದು, ಇದರ ಮೌಲ್ಯ ₹25 ಲಕ್ಷ. ಬೇಗೂರು ಹೋಬಳಿಯ ಚಿಕ್ಕತೋಗೂರು ಗ್ರಾಮದ ಸ.ನಂ.18ರ ₹1.50 ಕೋಟಿ ಮೌಲ್ಯದ 3 ಗುಂಟೆ ಗೋಮಾಳ ಒತ್ತುವರಿ ತೆರವುಗೊಳಿಸಲಾಗಿದೆ.
ಯಲಹಂಕ ಹೋಬಳಿಯ ಲಕ್ಷ್ಮಿಸಾಗರ ಗ್ರಾಮದ ಸ.ನಂ. 35/1ರ 22 ಗುಂಟೆ ಖರಾಬು ಒತ್ತುವರಿ ತೆರವುಗೊಳಿಸಿದ್ದು, ಅಂದಾಜು ಮೌಲ್ಯ ₹2.50 ಕೋಟಿ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.