ಆನೇಕಲ್: ‘ತಾಲ್ಲೂಕಿನ ವಿವಿಧೆಡೆ ಅಂದಾಜು ₹3.91 ಕೋಟಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ತಹಶೀಲ್ದಾರ್ ಪಿ.ದಿನೇಶ್ ತಿಳಿಸಿದ್ದಾರೆ.
ಕಸಬಾ ಹೋಬಳಿಯ ಮಡಿವಾಳದಲ್ಲಿ 12 ಗುಂಟೆ ಓಣಿ ದಾರಿಯನ್ನು ಒತ್ತುವರಿ ಮಾಡಿದನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಈ ಜಮೀನಿನ ಬೆಲೆ ಅಂದಾಜು ₹60 ಲಕ್ಷಕ್ಕೂ ಹೆಚ್ಚಾಗಿದೆ. ಗುಡ್ಡನಹಳ್ಳಿಯಲ್ಲಿ ಸರ್ಕಾರಿ ಕೆರೆಯಲ್ಲಿ ಒತ್ತುವರಿಯಾಗಿದ್ದ 2 ಗುಂಟೆ ಜಮೀನನ್ನು ತೆರವುಗೊಳಿಸಲಾಗಿದೆ.
ಅತ್ತಿಬೆಲೆ ಹೋಬಳಿಯ ಹಳೇಹಳ್ಳಿಯಲ್ಲಿ ಒತ್ತುವರಿ ಮಾಡಿದ್ದ 2 ಎಕರೆ ಸರ್ಕಾರಿ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 1.5 ಕೋಟಿಯಾಗಿದೆ. ಬೊಮ್ಮಸಂದ್ರದಲ್ಲಿ ಒತ್ತುವರಿ ಮಾಡಲಾಗಿದ್ದ 3 ಗುಂಟೆ ಸ್ಮಶಾನದ ಜಾಗವನ್ನು ವಶಕ್ಕೆ ಪಡೆಯಲಾಗಿದೆ.
ಜಿಗಣಿ ಹೋಬಳಿ ರಾಜಾಪುರದಲ್ಲಿ ಒತ್ತುವರಿಯಾಗಿದ್ದ 20 ಗುಂಟೆ ರಾಜಕಾಲುವೆಯನ್ನು ತೆರವುಗೊಳಿಸಲಾಗಿದ್ದು, ಇದರ ಮೌಲ್ಯ ₹1 ಕೋಟಿಯಾಗಿದೆ.
ಸರ್ಜಾಪುರ ಹೋಬಳಿಯ ತಿಂಡ್ಲು ಗ್ರಾಮದಲ್ಲಿ ಒತ್ತುವರಿ ಮಾಡಿದ್ದ 10 ಗುಂಟೆ ಸರ್ಕಾರಿ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಚಿಕ್ಕದುನ್ನಸಂದ್ರ ಗ್ರಾಮದಲ್ಲಿ ಸಾಬೀಕ್ ಕಂಪನಿ ಒತ್ತುವರಿ ಮಾಡಿದ್ದ 10 ಗುಂಟೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಮುತ್ತಾನಲ್ಲೂರು ಗ್ರಾಮದಲ್ಲಿ ಒತ್ತುವರಿ ಮಾಡಿದ್ದ 4 ಗುಂಟೆ ಸರ್ಕಾರಿ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಪಿ.ದಿನೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.