ದಾಬಸ್ ಪೇಟೆ: ಹೋಬಳಿಯ ರಾಮೇನಹಳ್ಳಿ ಗ್ರಾಮದ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳು ಜೋರಾಗಿ ಬೊಗಳಿವೆ. ಆ ಶಬ್ದಕ್ಕೆ ಜನರು ಎಚ್ಚರಗೊಂಡಿದ್ದರಿಂದ ಗದ್ದಲವಾಗಿ ಚಿರತೆ ಓಡಿ ಹೋಗಿದೆ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಮದೇವರ ಬೆಟ್ಟದ ಕಾಡಿಗೆ ಹೊಂದಿಕೊಂಡಂತೆ ರಾಮನಹಳ್ಳಿ ಗ್ರಾಮವಿದೆ. ಬುಧವಾರ ಮುಂಜಾನೆ 4.57ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಮದ ನೇಚರ್ ವಿಲ್ಲಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ.
ಕಾಡಿನಲ್ಲಿ ಚಿರತೆಗಳಿರುವುದನ್ನು ದನ-ಮೇಕೆ ಮೇಯಿಸುವವರು ಗುರುತಿಸಿದ್ದಾರೆ. ಚನ್ನೋಹಳ್ಳಿ ಮೂಲಕ ರಾಯರಪಾಳ್ಯ, ಮಧುಗಿರಿ ರಸ್ತೆಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಬೆಟ್ಟದ ಮೇಲೆ ದೇವಾಲಯವಿದೆ. ಪ್ರತಿ ಶನಿವಾರ, ಹಬ್ಬಗಳು ಹಾಗೂ ಸಂಕ್ರಾಂತಿಯಲ್ಲಿ ಪೂಜೆ ನಡೆಯುತ್ತವೆ.
‘ರಾಮದೇವರ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಂತೆ ತೋಟ ಹಾಗೂ ಮನೆಗಳಿವೆ. ಹೈನುಗಾರಿಕೆ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಚಿರತೆ, ಕರಡಿಗಳು ಇದ್ದು ಸಂಜೆಯ ವೇಳೆ ಓಡಾಡಲು ಭಯವಾಗುತ್ತದೆ‘ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ. ಗಂಗಾಧರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.