ADVERTISEMENT

‘ಜಾನಪದ ಸಾಹಿತ್ಯ ಡಿಜಿಟಲೀಕರಣಗೊಳ್ಳಲಿ’

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 19:37 IST
Last Updated 19 ಸೆಪ್ಟೆಂಬರ್ 2020, 19:37 IST
ಜಾನಪದ ಕಥೆ, ಹಾಡುಗಳ ಸಂಗ್ರಹಗಳ ಆರು ಡಿಜಿಟಲ್ ಕೃತಿಗಳನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಬೇಳೂರು ಸುದರ್ಶನ, ಕೃತಿಗಳ ಸಂಪಾದಕಿ ರೇಣುಕಾ ರಾಮಕೃಷ್ಣ ಭಟ್ಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಇದ್ದರು.
ಜಾನಪದ ಕಥೆ, ಹಾಡುಗಳ ಸಂಗ್ರಹಗಳ ಆರು ಡಿಜಿಟಲ್ ಕೃತಿಗಳನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಬೇಳೂರು ಸುದರ್ಶನ, ಕೃತಿಗಳ ಸಂಪಾದಕಿ ರೇಣುಕಾ ರಾಮಕೃಷ್ಣ ಭಟ್ಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಇದ್ದರು.   

ಬೆಂಗಳೂರು: ‘ಅಪ್ರಕಟಿತ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ, ಡಿಜಿಟಲೀಕರಣ ಮಾಡಬೇಕು’ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಮಿತ್ರಮಾಧ್ಯಮ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಎಲ್‌.ಆರ್‌. ಹೆಗಡೆ ಅವರ ಅಪ್ರಕಟಿತ ಜಾನಪದ ಸಂಗ್ರಹಗಳಆರು ಡಿಜಿಟಲ್ ಕೃತಿಗಳಾದ ‘ನಾಮಧಾರಿಗಳ ಆಡುಭಾಷೆ ಪದಗಳು’, ‘ಆಯ್ದ ನಾಮಧಾರಿ ಕಥೆಗಳು’, ‘ಹಾಲಕ್ಕಿ ಕಥೆಗಳು’, ‘ಶುದ್ಧ ಭಾಷೆಯ ಕಥೆಗಳು’, ‘ಕೋಲಾಟದ ಪದಗಳು’ ಹಾಗೂ ‘ಆಯ್ಕೆ ಮಾಡಿದ ಜಾನಪದ ಕಥೆಗಳು’ಬಿಡುಗಡೆ ಮಾಡಿದರು.

‘ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ, ಡಿಜಿಟಲೀಕರಣ ಮಾಡುವ ಕಾರ್ಯವನ್ನು ಯುವಜನತೆ ಕೈಗೆತ್ತಿಕೊಳ್ಳಬೇಕು. ಅಪಾರ ಜೀವನ ನಿಷ್ಠೆಯಿಂದಾಗಿ ಎಲ್‌.ಆರ್. ಹೆಗಡೆ ಅವರಿಗೆ ಉತ್ತರ ಕನ್ನಡದ ವೈವಿಧ್ಯಮಯ ಜಾನಪದ ಸಂಸ್ಕೃತಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. 2022ರಲ್ಲಿ ಅವರ ಜನ್ಮಶತಾಬ್ಧಿ ನಡೆಯಲಿದ್ದು, ಅಷ್ಟರಲ್ಲಿ ಅವರ ಇನ್ನುಳಿದ ಅಪ್ರಕಟಿತ ಸಂಗ್ರಹಗಳನ್ನು‍ಪ್ರಕಟಿಸಲು ಸರ್ಕಾರ ಮತ್ತು ಸಮುದಾಯಗಳು ಮುಂದಾಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮಿತ್ರಮಾಧ್ಯಮದ ಟ್ರಸ್ಟಿ ಬೇಳೂರು ಸುದರ್ಶನ್ ಮಾತನಾಡಿ, ‘ಫೇಸ್‌ಬುಕ್‌ನಂತಹ ಡಿಜಿಟಲ್ ಮಾಧ್ಯಮಗಳಲ್ಲಿ ಬರೆಯುವವರೇ ಆರು ಪುಸ್ತಕಗಳ ಅಕ್ಷರ ಜೋಡಣೆ ಮತ್ತು ಮುಖಚಿತ್ರವನ್ನು ರಚಿಸಿದ್ದಾರೆ. ಡಿಜಿಟಲ್ ಯುಗದ ಜನಪದರು ಪ್ರಾಚೀನ ಕಾಲದ ಜಾನಪದ ಸಾಹಿತ್ಯವನ್ನು ಉಳಿಸಲು ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ. ಎಲ್‌.ಆರ್. ಹೆಗಡೆ ಅವರ ಇನ್ನುಳಿದ ಅಪ್ರಕಟಿತ ಜಾನಪದ ಸಂಗ್ರಹ ವನ್ನು ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಲಾಗುವುದು’ ಎಂದು ತಿಳಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.