ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳನ್ನು ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನಿಗಮದ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜೆ.ಸಿ.ನಗರದಲ್ಲಿರುವ ಎಲ್ಐಸಿಯ ಪ್ರಾದೇಶಿಕ ಕಚೇರಿ ಬಳಿ ಸೇರಿದ್ದ ನೌಕರರು, ‘ಪಾಲಿಸಿದಾರರ ಹಿತವನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
‘ಎಲ್ಐಸಿಯನ್ನು ಖಾಸಗಿಯವರ ಕೈಗೆ ವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಸದ್ಯ ನೌಕರರಷ್ಟೇ ಪ್ರತಿಭಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಲಿಸಿದಾರರೂ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಸ್ಥಿತಿ ಬರಲಿದೆ’ ಎಂದು ಎಚ್ಚರಿಸಿದರು.
‘ಎಲ್ಐಸಿಯ ಶೇ 100ರಷ್ಟು ಷೇರು ಸದ್ಯ ಕೇಂದ್ರ ಸರ್ಕಾರದ ಬಳಿಯೇ ಇದೆ.ಪಾಲಿಸಿದಾರರ ಮೂಲಕ ಸಂಗ್ರಹಿಸುವ ಸಣ್ಣ ಉಳಿತಾಯದ ಮೊತ್ತ ದೇಶದ ಅಭಿವೃದ್ಧಿಗೆ ನೆರವಾಗುತ್ತಿದೆ.’ಸಾಮಾಜಿಕ ಜವಾಬ್ದಾರಿ ಇರುವ ಎಲ್ಐಸಿ ಮೇಲೆ ಜನರೂ ವಿಶ್ವಾಸವಿಟ್ಟಿದ್ದಾರೆ. ಇಂಥ ವಿಶ್ವಾಸಕ್ಕೆ ಸರ್ಕಾರವೇ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ’ ಎಂದು ದೂರಿದರು.
ಅಖಿಲ ಭಾರತ ವಿಮಾ ನೌಕರರ ಒಕ್ಕೂಟದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ‘ಎಲ್ಐಸಿ ಎಂಬುದು ವ್ಯಾಪಾರಿ ಸಂಸ್ಥೆಯಲ್ಲ, ಇದು, ಭಾರತದ ಅರ್ಥವ್ಯವಸ್ಥೆಯ ಜೀವನಾಡಿ. ಇದನ್ನು ಅರಿತು ಕೇಂದ್ರ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.