ಬೆಂಗಳೂರು: ಮಕ್ಕಳಿಗೆ ಅಥವಾ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ಕರ್ನಾಟಕದಲ್ಲಿ ತಂಬಾಕು ಮಾರಾಟಕ್ಕೆ ಮಾರಾಟಗಾರರ ಪರವಾನಗಿ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಒತ್ತಾಯಿಸಿದೆ.
‘ದೇಶದಲ್ಲಿ ಶೇ 14.6ಕ್ಕೂ ಅಧಿಕ ಅಪ್ತಾಪ್ತರು ಬೇರೆ ಬೇರೆ ವಿಧದಲ್ಲಿ ತಂಬಾಕು ಬಳಸುತ್ತಿರುವುದು ಕಂಡು ಬಂದಿದೆ. ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ಎಲ್ಲ ಬಗೆಯ ತಂಬಾಕು ಉತ್ಪನ್ನಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಬೇಕಾಬಿಟ್ಟಿ ದೊರೆಯುತ್ತಿರುವುದೇ ಮುಖ್ಯ ಕಾರಣ’ ಎಂದು ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ.ರಮೇಶ್ ಬಿಳಿಮಗ್ಗ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಚಿಲ್ಲರೆ ಮಾರಾಟ, ಗೂಡಂಗಡಿ, ಕಾಫಿ, ಟೀ ಸೆಂಟರ್ಗಳಲ್ಲಿ ತಂಬಾಕು ಉತ್ಪನ್ನಗಳು ಸಿಗುತ್ತಿರುವುದನ್ನು ತಡೆದರೆ ಬಳಕೆಯೂ ಕಡಿಮೆಯಾಗುತ್ತದೆ. ಶಾಲೆಗಳ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಮಕ್ಕಳಿಗೆ, ಯುವಕರಿಗೆ ತಂಬಾಕು ಉತ್ಪನ್ನಗಳು ಸಿಗುವುದೂ ತಪ್ಪಲಿದೆ’ ಎಂದರು.
ಈ ಕುರಿತು ಆರೋಗ್ಯ ಮತ್ತು ಶಿಕ್ಷಣ ತಜ್ಞರು, ಪೋಷಕರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಮೂರು ಸಾವಿರಕ್ಕೂ ಹೆಚ್ಚು ಪತ್ರ ಬರೆಯುವ ಮೂಲಕ ಆಗ್ರಹಿಸಲಾಗಿದೆ ಎಂದೂ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.