
ಸಾವಿತ್ರಿ ವ್ಯಾಸರಾವ್
ಬೆಂಗಳೂರು: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೀಡುವ ‘ನಿನ್ನೊಲುಮೆಯಿಂದಲೆ’ ಗೌರವ ಪುರಸ್ಕಾರಕ್ಕೆ ಸಾವಿತ್ರಿ ವ್ಯಾಸರಾವ್ ಆಯ್ಕೆಯಾಗಿದ್ದಾರೆ.
ಕಾವ್ಯ ನಿರ್ವಾಣಕ್ಕೆ ಬಾಳಿನುದ್ದಕ್ಕೂ ಸಹಕರಿಸಿದ ಕವಿ ಪತ್ನಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಸಾವಿತ್ರಿ ಅವರು ಕವಿ ಎಂ.ಎನ್. ವ್ಯಾಸರಾವ್ ಅವರ ಪತ್ನಿಯಾಗಿದ್ದಾರೆ.
ನ.2ರಂದು ಸಂಜೆ 4 ಗಂಟೆಗೆ ಬಸವನಗುಡಿಯಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಕವಿಪತ್ನಿ ದಿನಾಚರಣೆ ಹಾಗೂ ಈ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್ನ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ ಶಿಬಿರ
ಬೆಂಗಳೂರು: ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿ ಮತ್ತು ನಾರಾಯಣ ಹೃದಯಾಲಯದ ಸಂಯುಕ್ತ ಆಶ್ರಯದಲ್ಲಿ ಗುತ್ತಿಗೆದಾರರು ಮತ್ತು ಪೇಂಟರ್ಗಳಿಗೆ ಬುಧವಾರ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಒಟ್ಟು 75 ಮಂದಿ ಭಾಗವಹಿಸಿದ್ದರು. ರಕ್ತದ ಒತ್ತಡ, ರಕ್ತ ಪರೀಕ್ಷೆ, ಸಕ್ಕರೆ ಅಂಶ, ಇಸಿಜಿ ಇತ್ಯಾದಿ ಪರೀಕ್ಷೆ ನಡೆಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಸಲಹೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪೇಂಟಿಗ್ ಗುತ್ತಿಗೆದಾರರಿಗೆ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತರಬೇತಿ ನೀಡಲಾಯಿತು. ನಾರಾಯಣ ಹೃದಯಾಲಯ ತಂಡದ ಸದಸ್ಯರಾದ ದೇವರಾಜ, ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿ ತಂಡದ ಜಯಪ್ರಕಾಶ, ಅರುಣ ಹಾಗೂ ಇತರರು ಶಿಬಿರದ ಉಸ್ತುವಾರಿ ವಹಿಸಿದ್ದರು.
ವಾಟರ್ ಪ್ರೊಜೆಕ್ಷನ್ ಶೋ
ಬೆಂಗಳೂರು: ಬ್ರಿಗೇಡ್ ಗೇಟ್ವೇಯಲ್ಲಿರುವ ಒರಾಯನ್ ಮಾಲ್ನಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ನಮ್ಮ ಕರ್ನಾಟಕ ನಮ್ಮ ವಾಟರ್ ಪ್ರೊಜೆಕ್ಷನ್ ಶೋ’ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ನಕ್ಷೆಯ ಆಕಾರದಲ್ಲಿ ಪ್ರಕಾಶಮಾನವಾದ ಬಣ್ಣಗಳಲ್ಲಿ ಈ ದೃಶ್ಯಾವಳಿ ಪ್ರದರ್ಶನಗೊಳ್ಳಲಿದೆ. ಕಿತ್ತೂರು ರಾಣಿ ಚನ್ನಮ್ಮ ಅವರ ಚಿತ್ರಣವೂ ಪ್ರದರ್ಶನದ ಭಾಗವಾಗಿರುತ್ತದೆ. ಮನರಂಜನೆ ಮತ್ತು ಪರಂಪರೆಯ ವಿಶಿಷ್ಟತೆಯನ್ನು ಇಲ್ಲಿ ಕಾಣಬಹುದು. ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.
ಮಹಿಳಾ ಸಾಹಿತ್ಯ ಸಮಾವೇಶ ನ.8ಕ್ಕೆ
ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಅನಿಕೇತನ ಕನ್ನಡ ಬಳಗ ಹಾಗೂ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ನವೆಂಬರ್ 8ರಂದು ಶೇಷಾದ್ರಿಪುರಂ ಕಾಲೇಜಿನಲ್ಲಿ ರಾಜ್ಯಮಟ್ಟದ ಆರನೇ ಮಹಿಳಾ ಸಾಹಿತ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಪುಷ್ಪಾ ಬಸವರಾಜ ಬಣಕಾರ್ ಅವರು ಈ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಲೇಖಕಿ ಕೆ. ಷರೀಫಾ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು 10 ಮಂದಿ ಸಾಧಕರಿಗೆ ‘ಗಾಂಧಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿ ಸಾಧಕರಿಗೆ ‘ಬಿ.ಎಂ.ಶ್ರೀ ಮತ್ತು ಅನಿಕೇತನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.