ಬೆಂಗಳೂರು: ವಿಶ್ವಕರ್ಮ ಸಮುದಾಯದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ಪಿ. ನಂಜುಂಡಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮರಿದ್ದು, ಚಿನ್ನ ಬೆಳ್ಳಿ, ಕಬ್ಬಿಣ, ಮರ, ಕಂಚು ಮತ್ತು ಶಿಲ್ಪದ ಕೆಲಸ ಮಾಡುತ್ತಿದ್ದಾರೆ. ಈ ಐದು ಕಸುಬುಗಳಿಂದ ದೇಶಕ್ಕೆ ಗೌರವ ತರುವುದರ ಜೊತೆಗೆ ಎಲ್ಲರ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಸಮಾಜ ಇಂದು ಮೂಲೆ ಗುಂಪಾಗಿದೆ. ಎರಡು ತಿಂಗಳ ಹಿಂದೆ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದಾಗ, ಎರಡು ತಿಂಗಳ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು ಎಂದವರು ತಿಳಿಸಿದ್ದಾರೆ.
ಈ ವೃತ್ತಿಗಳನ್ನು ಮಾಡುವ ವಿಶ್ವಕರ್ಮರ ಸ್ಥಿತಿ ಕೊರೊನಾದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಾಡಲಿಕ್ಕೆ ಕೆಲಸ ಇಲ್ಲ. ಕೆಲಸ ಕೊಡುವವರಂತೂ ಇಲ್ಲವೇ ಇಲ್ಲವಾಗಿದ್ದು, ಜೀವನವೇ ಬೀದಿ ಪಾಲಾಗಿದೆ ಎಂದು ಹೇಳಿದ್ದಾರೆ.
ಐದು ಕಸುಬುಗಳಲ್ಲಿ ನಿರತರಾದ ಕುಟುಂಬಗಳಿಗೆ ತಲಾ ₹10 ಸಾವಿರದಂತೆ ವಿಶೇಷ ಪ್ಯಾಕೇಜ್ ನೀಡಬೇಕು. ವಿಶ್ವಕರ್ಮ ಸಮಾಜದ 18 ಸಾವಿರ ಜನರು ಅಭಿವೃದ್ಧಿ ನಿಗಮದಲ್ಲಿ ಒಟ್ಟಾರೆ ₹87 ಕೋಟಿ ಸಾಲ ಪಡೆದಿದ್ದಾರೆ. ಇದನ್ನು ಮನ್ನಾ ಮಾಡಬೇಕು ಎಂದು ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.