ADVERTISEMENT

ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:25 IST
Last Updated 3 ಡಿಸೆಂಬರ್ 2022, 18:25 IST
ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ಸ್ಥಳೀಯರು ಪ್ರತಿಭಟಿಸಿದರು
ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ಸ್ಥಳೀಯರು ಪ್ರತಿಭಟಿಸಿದರು   

ಬೆಂಗಳೂರು: ಬಸವನಗುಡಿ ಕ್ಷೇತ್ರದ ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಸ್ಥಳೀಯರ ಆಶಯಕ್ಕೆ ವಿರುದ್ಧವಾಗಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ದೇವೇಗೌಡ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇದನ್ನು ಆಟದ ಮೈದಾನವಾಗಿಯೇ ಉಳಿಸಲು ತೀರ್ಮಾನ ಕೈಗೊಂಡಿದ್ದರು. ಆದರೆ, ಈಗ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಾ.ಶಂಕರ ಗುಹಾ ದ್ವಾರಕಾನಾಥ್‌ ದೂರಿದ್ದಾರೆ.

ಮೈದಾನದಲ್ಲಿ ಉಚಿತ ಕ್ರಿಕೆಟ್ ತರಬೇತಿ, ಕ್ರೀಡೆಗಳ ಅಭ್ಯಾಸ ನಡೆಯುತ್ತಿದೆ. ಸ್ಥಳೀಯರಿಗೆ ಸುತ್ತಮುತ್ತ ಯಾವುದೇ ಮೈದಾನ ಇಲ್ಲ. ಕ್ರೀಡಾಪಟುಗಳು ಹಾಗೂ ಸ್ಥಳೀಯರು ಈ ಮೈದಾನ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿಗೆ ಸಾರ್ವಜನಿಕರಿಂದ ಈ ಮೈದಾನವನ್ನು ದೂರ ಮಾಡಬೇಕು ಎಂಬ ಉದ್ದೇಶದಿಂದ ಯಾವುದೇ ನಿರ್ವಹಣೆಗಳು ನಡೆಯುತ್ತಿಲ್ಲ. ಕಸದ ರಾಶಿ ಹಾಗೂ ಅನುಪಯುಕ್ತ ವಸ್ತು ತಂದು ಸುರಿಯಲಾಗುತ್ತಿದೆ. ಸಾರ್ವಜನಿಕರು ಈ ಮೈದಾನ ಬಳಸಲಾಗದೆ ತಾವೇ ಬಿಟ್ಟು ಹೋಗಲಿ ಎಂಬ ದುರುದ್ದೇಶ ಹೊಂದಿದಂತೆ ಕಾಣುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಜನಪ್ರತಿನಿಧಿಗಳು ಸ್ಥಳೀಯರ ಅವಶ್ಯಕತೆ ಹಾಗೂ ಆಶಯ ಏನು ಎಂಬುದರ ಕುರಿತು ಸಾರ್ವಜನಿಕರ ಬಳಿ ಚರ್ಚಿಸಬೇಕಿತ್ತು. ಆದರೆ, ಯಾವುದೇ ಚರ್ಚೆ ನಡೆಸಿಲ್ಲ. ಹೊಸ ಶಾಲೆ ನಿರ್ಮಾಣದ ಬದಲಿಗೆ ಬಸವನಗುಡಿ ವ್ಯಾಪ್ತಿಯಲ್ಲಿರುವ ಶಾಲೆಗಳ ಗುಣಮಟ್ಟ ಸುಧಾರಿಸಬೇಕು ಎಂದು ಸ್ಥಳೀಯರು ಕೋರಿದರು.

ಕಮಿಷನ್‌ ಆಸೆಗೆ ಕಾಮಗಾರಿ ಆರಂಭಿಸಬೇಕು ಎಂಬ ದುರುದ್ದೇಶ ಸಲ್ಲದು. ಆಟದ ಮೈದಾನಗಳು ಮಾಯವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿದೆ ಎಂದು ಶಂಕರ್ ಗುಹಾ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.