ADVERTISEMENT

ಲೋಕಸಭಾ ಚುನಾವಣೆ; ಮಹಿಳಾ ಬೇಡಿಕೆಗಳ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:40 IST
Last Updated 2 ಏಪ್ರಿಲ್ 2019, 19:40 IST
ಲೇಖಕಿ ಡಾ.ವಿಜಯಮ್ಮ ಅವರು ಮಹಿಳಾ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಬರಹಗಾರ್ತಿ ಲೀಲಾ ಸಂಪಿಗೆ, ಹಿರಿಯ ಪತ್ರಕರ್ತೆ ಆರ್‌.ಪೂರ್ಣಿಮಾ, ಲೇಖಕಿ ಕೆ.ಷರೀಫಾ ಇದ್ದರು–ಪ್ರಜಾವಾಣಿ ಚಿತ್ರ
ಲೇಖಕಿ ಡಾ.ವಿಜಯಮ್ಮ ಅವರು ಮಹಿಳಾ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಬರಹಗಾರ್ತಿ ಲೀಲಾ ಸಂಪಿಗೆ, ಹಿರಿಯ ಪತ್ರಕರ್ತೆ ಆರ್‌.ಪೂರ್ಣಿಮಾ, ಲೇಖಕಿ ಕೆ.ಷರೀಫಾ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಿಳಾ ಸಂಘಟನೆಗಳ ವತಿಯಿಂದ ಲೋಕಸಭಾ ಚುನಾವಣೆಯ ‘ಮಹಿಳಾ ಬೇಡಿಕೆಗಳಪಟ್ಟಿ’ಯನ್ನು ನಗರದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ, ಮಹಿಳಾ ಮುನ್ನಡೆ, ಗಾರ್ಮೆಂಟ್ಸ್‌ ಲೇಬರ್ಸ್‌ ಯೂನಿಯನ್‌ ಮತ್ತು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ವಿಜಯಮ್ಮ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಆದ್ಯತೆಯ ಮೇರೆಗೆ ಜಾರಿಗೆ ತರಬೇಕು, ಮಹಿಳೆ ಮತ್ತು ಮಕ್ಕಳಿಗೆ ಆಹಾರ ಭದ್ರತೆ ಒದಗಿಸಬೇಕು, ಸಮಾನ ವೇತನ ಪಾವತಿಸಬೇಕು, ಉತ್ತಮ ಆರೋಗ್ಯ ಸೇವೆ ಒದಗಿಸಬೇಕು, ಭೂರಹಿತ ಕುಟುಂಬಗಳಿಗೆ ಭೂಮಿ ನೀಡಬೇಕು, ನಾಗರಿಕ ಹಕ್ಕುಗಳನ್ನು ರಕ್ಷಿಸಬೇಕು ಎನ್ನುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಕಾರ್ಯಕ್ರಮದಲ್ಲಿಮಂಡಿಸಲಾಯಿತು.

ADVERTISEMENT

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌.ಲಕ್ಷ್ಮೀ ಮಾತನಾಡಿ,‘ಆಹಾರ ಭದ್ರತೆ ಇಲ್ಲದೆ ಜನಹಸಿವಿನಿಂದ ಸಾಯುತ್ತಿದ್ದಾರೆ. ಭಾರತ ಹಸಿವಿನ ಸೂಚ್ಯಂಕದಲ್ಲಿ 103ನೇ ಸ್ಥಾನದಲ್ಲಿದೆ. ಶೇ50ರಷ್ಟು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಿಪಿಎಲ್‌ ಮಾನದಂಡಗಳು ಬಹುಸಂಖ್ಯಾತ ಬಡವರನ್ನು ಹೊರಗಿಡುತ್ತಿವೆ. ಯಾವ ಸರ್ಕಾರಗಳೂ ಆಹಾರ ಭದ್ರತೆ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಸಿವು ಅಭಿವೃದ್ಧಿಯ ಮುಖ್ಯ ವಿಷಯವಾಗಬೇಕು.ದೇಶಕ್ಕೆ ಒಂದು ಜನಪರವಾದ ಆಹಾರ ನೀತಿಯ ಅಗತ್ಯವಿದೆ’ ಎಂದು ಅಭಿಪ್ರಾಯ
ಪಟ್ಟರು.

ಲೇಖಕಿ ಕೆ.ಷರೀಫಾ,‘ಸನಾತನ ಸಂಸ್ಥೆಗಳನ್ನು ನಿಷೇಧಿಸಬೇಕು. ಅಘೋಷಿತ ತುರ್ತು ಪರಿಸ್ಥಿತಿಗೆ ಆದ್ಯತೆ ಕೊಡಬಾರದು. ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು’ ಎಂದು ಹೇಳಿದರು.

‘ದೌರ್ಜನ್ಯ ವಿರೋಧಿ ಕಾನೂನನ್ನು ಜಾರಿಗೆ ತರುವವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದರು.

**

ರಾಜಕೀಯ ಮೀಸಲಾತಿ ಬಗ್ಗೆ ತುಂಬಾ ವರ್ಷಗಳಿಂದ ಮಾತನಾಡುತ್ತಿದ್ದೇವೆ. ಆದರೆ ಅದು ಜಾರಿಗೆ ಬರುತ್ತಿಲ್ಲ. ಮಹಿಳೆಯರಿಗೆ ಉತ್ತಮ ಆರೋಗ್ಯ ಸೇವೆಗಳೂ ಸಿಗುತ್ತಿಲ್ಲ
- ಜಯಮ್ಮ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.