ADVERTISEMENT

ಡೀಸೆಲ್‌ ದರ ಇಳಿಸದಿದ್ದರೆ ರಾಷ್ಟ್ರವ್ಯಾಪಿ ಹೋರಾಟ

ಲಾರಿ ಮಾಲೀಕರ ಸಂಘಟನೆಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 18:48 IST
Last Updated 3 ಆಗಸ್ಟ್ 2020, 18:48 IST
ಬಿ. ಚನ್ನಾರೆಡ್ಡಿ 
ಬಿ. ಚನ್ನಾರೆಡ್ಡಿ    

ಬೆಂಗಳೂರು:ಡೀಸೆಲ್‌ ದರ ಕಡಿಮೆ ಮಾಡಿ, ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ತಿಂಗಳೊಳಗೆ ಈ ಬೇಡಿಕೆ ಈಡೇರಿಸದಿದ್ದರೆ ರಾಷ್ಟ್ರದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ ಎಚ್ಚರಿಕೆ ನೀಡಿದೆ.

‘ದೇಶದಲ್ಲಿ ಕೋವಿಡ್‌ ಬಿಕ್ಕಟ್ಟು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಏರುಪೇರಾಗಿವೆ. ಸರಕು ಸಾಗಣೆ ವಾಹನಗಳ ವ್ಯವಹಾರವೂ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದಿನೇ ದಿನೇ ಡೀಸೆಲ್‌ ದರ ಏರಿಸುತ್ತಿರುವುದರಿಂದ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ತಮ್ಮ ಪಾಲಿನ ತೆರಿಗೆಗಳನ್ನು ಏರಿಸಿದ್ದರಿಂದಲೇ ಡೀಸೆಲ್‌ ದರವೂ ಹೆಚ್ಚಾಗಿದೆ’ ಎಂದು ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಅಮೆರಿಕದಲ್ಲಿ ಡೀಸೆಲ್‌ ಮೇಲೆ ಶೇ 19ರಷ್ಟು ತೆರಿಗೆ ವಿಧಿಸಿದರೆ, ಫ್ರಾನ್ಸ್‌ನಲ್ಲಿ ಶೇ 63ರಷ್ಟಿದೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ಈ ಪ್ರಮಾಣ ಶೇ 250ರಷ್ಟು ಇದೆ. ಸರಕು ಸಾಗಣೆ ವಾಹನಗಳ ಮಾಲೀಕರ ಮೇಲೆ ಕೇಂದ್ರ ಸರ್ಕಾರ ಯಾವ ರೀತಿ ಅವೈಜ್ಞಾನಿಕವಾಗಿ ತೆರಿಗೆ ಹೊರೆ ಹೇರುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

‘ರಾಷ್ಟ್ರದಲ್ಲಿನ ಲಾರಿ ಮಾಲೀಕರ ಎಲ್ಲ ಸಂಘಟನೆಗಳು ಚರ್ಚಿಸಿ, ಅಗತ್ಯ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಡೀಸೆಲ್‌ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು, ಥರ್ಡ್‌ ಪಾರ್ಟಿ ಇನ್ಷುರೆನ್ಸ್‌ ಮೇಲಿನ ತೆರಿಗೆಯನ್ನು ರದ್ದು ಮಾಡುವಂತೆಯೂ ಕೋರಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಷ್ಕರ ಮಾಡುವುದು ಅನಿವಾರ್ಯವಾಗುತ್ತದೆ’ ಎಂದೂ ಅವರು ಹೇಳಿದರು.

ಸಂಘದ ಪದಾಧಿಕಾರಿಗಳಾದ ಯು. ಶ್ರೀನಿವಾಸ್‌, ಎನ್.‌ ಶ್ರೀನಿವಾಸ್‌ ರಾವ್‌, ಆರ್.‌ವಿ. ಪ್ರಕಾಶ್‌ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.