ಸಮಾರಂಭದಲ್ಲಿ ಕೆ.ವಿ. ಲಕ್ಷ್ಮೀನಾರಾಯಣ ಆಚಾರ್ಯ, ಸಿ.ಆರ್. ಮುರಳಿ, ಶ್ರೀನಿಧಿ ಆಚಾರ್ಯ ಉತ್ತನೂರು ಹಾಗೂ ಎಸ್. ಸುಘೋಷಾಚಾರ್ಯ ಅವರಿಗೆ ‘ಮಧ್ವವಿಜಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ, ಗುರುರಾಜ ಪೋಶೆಟ್ಟಿಹಳ್ಳಿ, ಜಿ. ನಾಗೇಂದ್ರ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಧ್ವ ಮತದ ಮಠಾಧೀಶರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗಟ್ಟಿನಿಂದ ಮಾಧ್ವ ಸಮಾಜದವರನ್ನು ಕೊಂಡೊಯ್ಯಬೇಕು’ ಎಂದು ತಂಬಿಹಳ್ಳಿಯ ಮಾಧವ ತೀರ್ಥರ ಮಠದ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಷನ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆ.ವಿ. ಲಕ್ಷ್ಮೀನಾರಾಯಣ ಆಚಾರ್ಯ, ಸಿ.ಆರ್. ಮುರಳಿ, ಶ್ರೀನಿಧಿ ಆಚಾರ್ಯ ಉತ್ತನೂರು ಹಾಗೂ ಎಸ್. ಸುಘೋಷಾಚಾರ್ಯ ಅವರಿಗೆ ‘ಮಧ್ವವಿಜಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ದೀಪದ ಬುಡದಲ್ಲಿ ಕತ್ತಲೆ ಎಂಬಂತಾಗಿದೆ ನಮ್ಮ ಸ್ಥಿತಿ. ನಮ್ಮಲ್ಲಿ ಒಗ್ಗಟ್ಟು ಮೂಡಬೇಕು. ಈ ಸಂಬಂಧ ನಾನು ಕಳೆದ 40 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದು, ಈ ಮತದ ಅನೇಕ ಮಠಾಧೀಶರ ಜತೆಗೆ ಮಾತುಕತೆ ನಡೆಸಿದ್ದೇನೆ. ಎಷ್ಟೇ ಪ್ರಯತ್ನಪಟ್ಟರೂ ನಮ್ಮ ಮತದವರಲ್ಲಿ ಒಗ್ಗಟ್ಟು ಸಾಧ್ಯವಾಗಲಿಲ್ಲ. ದೈವ ಇಚ್ಛೆ ಇದ್ದಾಗ ಸಾಧ್ಯ ಆಗುತ್ತದೆ’ ಎಂದು ನಂಬಿದ್ದೇನೆ ಎಂದರು.
‘ಯಾರೇ ಒಬ್ಬರು ಮಧ್ವ ಮತದ ಸ್ವಾಮೀಜಿಯಲ್ಲ. ಎಲ್ಲ ಮಠದ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಎಲ್ಲರೂ ಹೋಗಬೇಕು. ನಾವು ಎಲ್ಲರೂ ಒಂದಾಗಿ ಸಾಗಬೇಕು’ ಎಂದು ಹೇಳಿದರು.
ವಿದ್ವಾಂಸ ಕೆ.ವಿ. ಲಕ್ಷ್ಮೀನಾರಾಯಣ ಆಚಾರ್ಯ, ‘ಮಧ್ವ ಮತದ ಯಶಸ್ಸನ್ನು ಬೇರೆ ಮತದವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕುತಂತ್ರ ಮಾಡಿ, ಕಲಹ ಹುಟ್ಟು ಹಾಕುತ್ತಿದ್ದಾರೆ. ನಾವು ಇದನ್ನು ಅರಿತು, ಒಗ್ಗಟ್ಟಿನಿಂದ ಸಾಗಬೇಕು’ ಎಂದು ಹೇಳಿದರು.
ಸಾಹಿತಿ ಗುರುರಾಜ ಪೋಶೆಟ್ಟಿಹಳ್ಳಿ, ‘ನಮ್ಮ ಸಮುದಾಯದ ಅನೇಕರು ಎಲೆಮರೆಯ ಕಾಯಿಯಂತೆ ಇದ್ದು, ಸಮಾಜಕ್ಕೆ ಅವರದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ಹೆಚ್ಚಬೇಕು. ಮಧ್ವಾಚಾರ್ಯರ ಕೀರ್ತಿ ಎಲ್ಲೆಡೆ ಪಸರಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಉಪಾಧ್ಯಕ್ಷ ಜಿ. ನಾಗೇಂದ್ರ, ಫೌಂಡೇಷನ್ ಸಂಸ್ಥಾಪನಾಧ್ಯಕ್ಷ ವೆಂಕೋಬರಾವ್ ಬುಕ್ಕಸಾಗರ, ರಾಷ್ಟ್ರೀಯ ಅಧ್ಯಕ್ಷ ರಾಘವೇಂದ್ರ ಪ್ರಸಾದ್ ಕೋಟಿ, ಸಹ ಸಂಸ್ಥಾಪಕ ಶ್ರೀನಿವಾಸ ಜೋಶಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.