ADVERTISEMENT

ಐವರಿಗೆ ‘ಮಡಿವಾಳ ಮಾಚಿದೇವ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 19:53 IST
Last Updated 16 ಜುಲೈ 2023, 19:53 IST
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಟಿ.ಎಂ. ಪ್ರಸಾದ್, ಅಶೋಕ್ ದೊಮ್ಮಲೂರು, ಬಿ.ಶ್ರೀಧರ್, ಮೈಲಾರಿ ಮಡಿವಾಳರ್ ಹಾಗೂ ಮಹೇಂದ್ರ ಮುನ್ನೋತ್ ಜೈನ್ ಅವರಿಗೆ ‘ಮಡಿವಾಳ ಮಾಚಿದೇವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಟಿ.ಎಂ. ಪ್ರಸಾದ್, ಅಶೋಕ್ ದೊಮ್ಮಲೂರು, ಬಿ.ಶ್ರೀಧರ್, ಮೈಲಾರಿ ಮಡಿವಾಳರ್ ಹಾಗೂ ಮಹೇಂದ್ರ ಮುನ್ನೋತ್ ಜೈನ್ ಅವರಿಗೆ ‘ಮಡಿವಾಳ ಮಾಚಿದೇವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.    

ಬೆಂಗಳೂರು: ‘ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ. ದೀಪಕ್ ಆಗ್ರಹಿಸಿದರು. 

ಸಂಘವು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಸಮಾರಂಭದಲ್ಲಿ ಮಹೇಂದ್ರ ಮುನ್ನೋತ್ ಜೈನ್, ಅಶೋಕ್ ದೊಮ್ಮಲೂರು, ಬಿ. ಶ್ರೀಧರ್, ಟಿ.ಎಂ. ಪ್ರಸಾದ್ ಹಾಗೂ ಮೈಲಾರಿ ಮಡಿವಾಳರ್ ಅವರಿಗೆ ‘ಮಡಿವಾಳ ಮಾಚಿದೇವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

‘ಮಡಿವಾಳ ಜನಾಂಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಗತಿ ಹೊಂದಬೇಕಾದರೆ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಈ ಬಗ್ಗೆ ದಶಕಗಳ ಹೋರಾಟದ ನಂತರ 2009–10ರಲ್ಲಿ ಡಾ. ಅನ್ನಪೂರ್ಣ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಜನಾಂಗದ ಸ್ಥಿತಿಗತಿಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಿ, ವರದಿ ಸಲ್ಲಿಸಲಾಗಿತ್ತು. ಆದರೆ, ಈ ವರದಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ ನನೆಗುದಿಗೆ ಬೀಳುವಂತೆ ಮಾಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ದೇಶದ 17 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಜನಾಂಗವು ಪರಿಶಿಷ್ಟ ಜಾತಿಯಲ್ಲಿದೆ. ರಾಜ್ಯದಲ್ಲಿ ನಮ್ಮ ಜನಾಂಗವನ್ನು ಚುನಾವಣೆಗೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು. 

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅವರು, ‘ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ನಮ್ಮ ಸರ್ಕಾರವು ಮಡಿವಾಳ ಜನಾಂಗಕ್ಕೆ ಸ್ಪಂದಿಸಲಿದೆ’ ಎಂದು ಭರವಸೆ ನೀಡಿದರು. 

ಚಿತ್ರದುರ್ಗದ ಮಡಿವಾಳ ಮಠದ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನೂ ಪ್ರದಾನ ಮಾಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.