ADVERTISEMENT

ಬೀಗ ಹಾಕುವುದನ್ನೇ ಮರೆತ ಮಹಿಳೆ: ಮನೆಗೆ ನುಗ್ಗಿದ್ದ ಕಳ್ಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:30 IST
Last Updated 9 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪ್ರಶಾಂತ್ ಅಲಿಯಾಸ್ ಸೋಡುನನ್ನು (21) ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರ ಮಂಜುನಾಥನಗರ ನಿವಾಸಿ ಪ್ರಶಾಂತ್, ಹಲವು ವರ್ಷಗಳಿಂದ ಕಳ್ಳತನ ಎಸಗುತ್ತಿದ್ದ. ಆತನಿಂದ ₹ 16.85 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಗೀತಾ, 2020ರ ಡಿ. 29ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಮನೆಗೆ ಬೀಗ ಹಾಕಿ ಹೋಗುವುದನ್ನೇ ಮರೆತಿದ್ದರು. ಮನೆ ಗುರುತಿಸಿದ್ದ ಆರೋಪಿ, ಒಳನುಗ್ಗಿ ಬೀರುವಿನಲ್ಲಿಟ್ಟ 17 ಗ್ರಾಂ ಚಿನ್ನಾಭರಣ ಹಾಗೂ ₹ 15,000 ನಗದು ಕದ್ದು ಹೋಗಿದ್ದ. ಮಧ್ಯಾಹ್ನ ಊಟಕ್ಕೆಂದು ಗೀತಾ ಮನೆಗೆ ಬಂದಾಗ, ಕಳ್ಳತನವಾಗಿರುವುದು ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು.’

ADVERTISEMENT

‘ಆರೋಪಿ ಪ್ರಶಾಂತ್, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಕೆ.ಪಿ.ಅಗ್ರಹಾರ, ಬ್ಯಾಡರಹಳ್ಳಿ, ಬಸವೇಶ್ವರನಗರ, ವಿಜಯನಗರ, ಜ್ಞಾನಭಾರತಿ, ಜಗಜೀವನ್‌ರಾಮ್ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಗಳಲ್ಲೂ ಆರೋಪಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.