ADVERTISEMENT

ಗೋವಾದಲ್ಲಿ ಕನ್ನಡಿಗರ ಹಿತರಕ್ಷಣೆಗೆ ಮಹೇಶ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 19:57 IST
Last Updated 15 ಏಪ್ರಿಲ್ 2024, 19:57 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಅಲ್ಲಿನ ಸರ್ಕಾರ ಕನ್ನಡಿಗರ ಹಿತರಕ್ಷಣೆ ಮಾಡಬೇಕು‘ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆಗ್ರಹಿಸಿದ್ದಾರೆ.

ಉತ್ತರ ಗೋವಾದಲ್ಲಿ ಕನ್ನಡಿಗರ 22 ಮನೆಗಳನ್ನು ಕೆಡವಿದ್ದಲ್ಲದೇ, ನೆಲಸಮಗೊಳಿಸುವ ಕಾರ್ಯ ಮುಂದುವರಿಸಿದ್ದಾರೆ. ರಾಜ್ಯದ ಎಲ್ಲ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಕನ್ನಡಿಗರ ರಕ್ಷಣೆಗೆ ಧಾವಿಸಬೇಕು. ಬರಹಗಾರರು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಮತ್ತು ಗೋವಾ ನಡುವೆ ಶತಮಾನಗಳಷ್ಟು ಪುರಾತನವಾದ ಬಾಂಧವ್ಯವಿದೆ. ಇಂದಿಗೂ ಗೋವಾ ತನ್ನ ನಿತ್ಯದ ಚಟುವಟಿಕೆಗಳಿಗೆ ಕರ್ನಾಟಕವನ್ನು ಅವಲಂಭಿಸಿದೆ. ಗೋವಾದಲ್ಲಿರುವ 10 ಲಕ್ಷ ಜನಸಂಖ್ಯೆಯಲ್ಲಿ 2 ಲಕ್ಷ ಕನ್ನಡಿಗರಿದ್ದಾರೆ. ಅನೇಕ ವಿಚಾರದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. 2004ರಿಂದ ಇಲ್ಲಿವರೆಗೆ ಕನ್ನಡಿಗರ 800ಕ್ಕೂ ಅಧಿಕ ಮನೆಗಳನ್ನು ಧ್ವಂಸ ಮಾಡಲಾಗಿದೆ. ಬೈನಾ ಬೀಚ್‌ನಲ್ಲಿ 2015ರಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕನ್ನಡಿಗರನ್ನು ಹೊರಹಾಕಿದಾಗ ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಿದ್ದೆವು. ಅಂಥ ಹೋರಾಟ ಈಗ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.