ADVERTISEMENT

ಬೆಂಗಳೂರು | ಮೊಹರಂ: ದೇಹದಂಡನೆ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 16:05 IST
Last Updated 29 ಜುಲೈ 2023, 16:05 IST
ನಗರದ ಜಾನ್ಸನ್ ಮಾರುಕಟ್ಟೆಯ ಬಳಿ ಶನಿವಾರ ಮೊಹರಂ ಅಂಗವಾಗಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿದರು – ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಜಾನ್ಸನ್ ಮಾರುಕಟ್ಟೆಯ ಬಳಿ ಶನಿವಾರ ಮೊಹರಂ ಅಂಗವಾಗಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿದರು – ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಮೊಹರಂ ಅಂಗವಾಗಿ ನಗರದಲ್ಲಿ ಶನಿವಾರ ಜಾನ್ಸನ್‌ ಮಾರುಕಟ್ಟೆ ಬಳಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿ ದೇಹದಂಡನೆ ಮಾಡಿದರು.

ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ಕಪ್ಪುಬಟ್ಟೆ ಧರಿಸಿದ್ದ ಸಾವಿರಾರು ಮಂದಿ ಭಾಗವಹಿಸಿದ್ದರು. 

ವಿಶೇಷಾಲಂಕೃತ ಸ್ತಬ್ಧಚಿತ್ರಗಳು ಸಾಗಿಬಂದವು. ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಮಾರುಕಟ್ಟೆಯ ಅಕ್ಕಪಕ್ಕದ ರಸ್ತೆಯಲ್ಲಿ ಮಧ್ಯಾಹ್ನ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ADVERTISEMENT

ಮೆರವಣಿಗೆ ವೇಳೆ ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ‘ಆಲಿ ದೂಲಾ’ ಎಂದು ಕೂಗುತ್ತಾ ದಾರಕ್ಕೆ ಕಟ್ಟಿದ್ದ ಬ್ಲೇಡ್‌ಗಳ ಗೊಂಚಲನ್ನು ಜನರು ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿದರು.

ಮೆರವಣಿಗೆಗೆ ಮೊದಲು ಜಾನ್ಸನ್ ಮಾರುಕಟ್ಟೆ ಬಳಿಯ ಅಲಿ ಅಸ್ಕರ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಅಲ್ಲದೇ ನಗರದ ವಿವಿಧ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಯಿತು.

ಜಾನ್ಸನ್‌ ಮಾರುಕಟ್ಟೆ ಬಳಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ನರ್ಸ್‌ಗಳು ಇದ್ದರು.

ಭಾವೈಕ್ಯದ ಪ್ರತೀಕವಾಗಿರುವ ಮೊಹರಂ ಅನ್ನು ರಾಜಧಾನಿ ಸುತ್ತಮುತ್ತಲ ಬಡಾವಣೆಗಳಲ್ಲೂ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು.

ಕೆಲವರು ಅಲ್ಲಾ ದೇವರು ಮತ್ತು ಬೀಬಿ ಫಾತಿಮಾರ ಹೆಸರಿನಲ್ಲಿ ಹಾಡಿದ ಹಾಡುಗಳಿಗೆ ಜನರು ಭಾವುಕರಾಗಿ ಭಕ್ತಿಯ ಮೊರೆ ಹೋದರು. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾದರು.

‘ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಮೊಮ್ಮಕ್ಕಳಾದ ಹಸನ್‌– ಹುಸೇನ್‌ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದಿದರು. ಅವರ ಸಾವಿನ ಸ್ಮರಣಾರ್ಥ ಈ ಶೋಕಾಚರಣೆ ಆಚರಿಸುತ್ತಿದ್ದೇವೆ’ ಎಂದು ಮುಸ್ಲಿಂ ಸಮಾಜದ ಮುಖಂಡರು ಹೇಳಿದರು.

ಮೊಹರಂ ಅಂಗವಾಗಿ ಶಿವಾಜಿನಗರದ ಒಪಿಎಚ್‌ ರಸ್ತೆಯ ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.