
ಸಾಂದರ್ಭಿಕ ಚಿತ್ರ
ಕೃಪೆ: ಜೆಮಿನಿ ಎಐ
ಬೆಂಗಳೂರು: ಮೆಜೆಸ್ಟಿಕ್ನಲ್ಲಿ ಸುಲಿಗೆ ಪ್ರಕರಣಗಳು ಮುಂದುವರಿದಿದ್ದು, ಗುರುವಾರ ರಾತ್ರಿ ಯುವತಿಯ ಮೊಬೈಲ್ ಅನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಓಡಿದ್ದ. ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಧಳಿಸಿ ಮೊಬೈಲ್ ಅನ್ನು ಯುವತಿಗೆ ವಾಪಸ್ ಕೊಡಿಸಿದ್ದಾರೆ.
ಗುರುವಾರ ರಾತ್ರಿ 8.30ರ ಸಮಯದಲ್ಲಿ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಡೆಗೆ ಹೋಗಲು ಇಬ್ಬರು ಯುವತಿಯರು ರಸ್ತೆ ದಾಟುತ್ತಿದ್ದರು. ಎದುರಿನಿಂದ ಬಸ್ ಬಂದಾಗ ಯುವತಿಯರು ನಿಂತಿದ್ದರು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಒಬ್ಬ ಯುವತಿಯ ಕೈಯಿಂದ ಮೊಬೈಲ್ ಕಿತ್ತು ಓಡಿದ್ದ. ಯುವತಿಯರು ಕಿರುಚಿದ್ದರಿಂದ ಬಿಎಂಟಿಸಿ ನೌಕರರು ಮತ್ತು ಸಾರ್ವಜನಿಕರು ಆ ವ್ಯಕ್ತಿಯನ್ನು ಬೆನ್ನಟ್ಟಿ ಹಿಡಿದು ಥಳಿಸಿದರು.
ಮೆಜೆಸ್ಟಿಕ್ನಲ್ಲಿ ನಡೆಯುತ್ತಿರುವ ಸುಲಿಗೆಕೋರರ, ಕಳ್ಳಕಾಕರ, ವೇಶ್ಯಾವಾಟಿಕೆಯ ಹಾವಳಿ ಹೆಚ್ಚಾಗಿರುವ ಬಗ್ಗೆ ‘ಪ್ರಜಾವಾಣಿ’ಯು ‘ಮೆಜೆಸ್ಟಿಕ್: ಅಕ್ರಮಗಳ ಹಾವಳಿ’ ವಿಶೇಷ ವರದಿಯನ್ನು ಬುಧವಾರ ಪ್ರಕಟಿಸಿ ಗಮನ ಸೆಳೆದಿತ್ತು.
ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರ ನಡುವೆಯೇ ಈ ಸುಲಿಗೆ ನಡೆದಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
‘ಆರೋಪಿಯನ್ನು ಹಿಡಿದ ಬಳಿಕ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೂ, ಯಾವುದೇ ಸ್ಪಂದನೆ ನೀಡಿಲ್ಲ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರೂ ಸ್ಥಳೀಯ ಪೊಲೀಸರು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.