ADVERTISEMENT

ಮಲೆಯಾಳಿ ನಟ ಬಾಬನ್ ಚಿತ್ರ ಕರ್ನಾಟಕದ ಪಠ್ಯಪುಸ್ತಕದಲ್ಲಿ: ಡಿ.ಕೆ. ಸುರೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 4:15 IST
Last Updated 1 ಫೆಬ್ರುವರಿ 2022, 4:15 IST
ಡಿಕೆ ಸುರೇಶ್
ಡಿಕೆ ಸುರೇಶ್   

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಪಠ್ಯಪುಸ್ತಕದಲ್ಲಿ ಮಲೆಯಾಳಿ ಚಿತ್ರ ನಟ ಕುಂಚಾಕೋ ಬಾಬನ್ ಅವರ ಚಿತ್ರವನ್ನು ಅಂಚೆಯಣ್ಣನ ಶೀರ್ಷಿಕೆ ಜತೆ ಪ್ರಕಟಿಸಿರುವುದರ ಔಚಿತ್ಯ ಪ್ರಶ್ನಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್‌, ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ಪಠ್ಯಪುಸ್ತಕದಲ್ಲಿ ತಮ್ಮ ಚಿತ್ರ ಇರುವುದನ್ನು ಟ್ಯಾಗ್ ಮಾಡಿ ಬಾಬನ್‌ ಮಾಡಿರುವ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿರುವ ಸುರೇಶ್‌, ‘ಪಠ್ಯಪುಸ್ತಕ ಸಂಘವುಯಾವುದೇ ಪರಿಶೀಲನೆ ನಡೆಸದೇ ಅಂತರ್ಜಾಲದಿಂದ ಚಿತ್ರ ಗಳನ್ನು ತೆಗೆದು ಪ್ರಕಟಿಸುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿಬೇಕೇ’ಎಂದು ಪ್ರಶ್ನಿಸಿದ್ದಾರೆ.

‘ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರ ಗಳು ಮತ್ತು ಪಠ್ಯಗಳನ್ನು ಗಮನಿಸಿ ದರೆ ಪುಸ್ತಕಗಳನ್ನು ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಸಿದ್ಧಪಡಿಸಲಾ ಗುತ್ತಿದೆಯೇ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹಾಗೂ ಹಿಂದಿನ ಸಚಿವ ಎಸ್. ಸುರೇಶ್‌ಕುಮಾರ್ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಿಜೆಪಿ ಸರ್ಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಎದುರು ತಲೆತಗ್ಗಿಸುವಂತಾಗಿದೆ ಎಂದಿದ್ದಾರೆ. ತಮ್ಮ ಚಿತ್ರ ಇರುವ ಪಠ್ಯ ಪುಸ್ತಕದ ಪುಟವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ನಟ ಬಾಬನ್‌, ‘ಕೊನೆಗೂ ತಮಗೊಂದು ಸರ್ಕಾರಿ ಕೆಲಸ ಸಿಕ್ಕಿತು’ ಎಂದು ತಮಾಷೆಯಿಂದ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.