ಬೆಂಗಳೂರು: ರಾಜರಾಜೇಶ್ವರಿ ನಗರದ ಬೆಸ್ಟ್ ಕ್ಲಬ್ನಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ದಯಾನಂದ(41) ಮೃತಪಟ್ಟವರು.
ಪ್ರಕರಣದ ಸಂಬಂಧ ಮೃತ ವ್ಯಕ್ತಿಯ ಪತ್ನಿ ಅಕ್ಷತಾ ದಯಾನಂದ ಅವರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.
‘ಆರ್.ಆರ್.ನಗರದ ಗೊಟ್ಟಿಗೆರೆಯ ಅವನಿ ಹಿಲ್ಸ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ದಯಾನಂದ ಅವರು ಕುಟುಂಬದವರ ಜತೆಗೆ ನೆಲೆಸಿದ್ದರು. ಅಪಾರ್ಟ್ಮೆಂಟ್ನ ಸ್ನೇಹಿತರಾದ ಸಂದೀಪ್, ಶರತ್ ಹಾಗೂ ವಿರೂಪಾಕ್ಷ ಅವರ ಜತೆಗೆ ಈಜುಕೊಳಕ್ಕೆ ತೆರಳಿದ್ದರು. ನಂತರ, ಶರತ್ ಅವರ ಪತ್ನಿ ಪಲ್ಲವಿ ಮನೆಗೆ ಬಂದು ದಯಾನಂದ ಅವರು ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ತೆರಳಿ ನೋಡಿದಾಗ ತುರ್ತು ನಿಗಾ ಘಟಕದಲ್ಲಿ ಅವರನ್ನು ಇಡಲಾಗಿತ್ತು. ಅವರು ಪ್ರಜ್ಞೆ ತಪ್ಪಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಯಾನಂದ ಅವರ ಜತೆಗೆ ಈಜಲು ತೆರಳಿದ್ದವರನ್ನು ವಿಚಾರಿಸಿದಾಗ, ಈಜುಕೊಳದ ಆಳ ಪ್ರದೇಶಕ್ಕೆ ಹೋಗಿ ಮುಳುಗಿದ್ದರು. ಮೇಲ್ವಿಚಾರಕರ ಸಹಾಯದಿಂದ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆತಂದು ಸೇರಿಸಲಾಗಿದೆ ಎಂದು ಹೇಳಿದ್ಧಾರೆ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದು ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸುವಂತೆ ಅವರು ದೂರಿನಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.