ಬೆಂಗಳೂರು: ‘ಹೆಚ್ಚಿನ ಶಿಕ್ಷಕರಲ್ಲಿ ದೀರ್ಘಕಾಲದ ಬೆನ್ನು ಮತ್ತು ಕುತ್ತಿಗೆ ನೋವು, ಕೀಲು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಕನಕಪುರ ರಸ್ತೆಯ ಮಣಿಪಾಲ ಆಸ್ಪತ್ರೆ ವೈದ್ಯರು ಕಳವಳ ವ್ಯಕ್ತಪಡಿಸಿದರು.
ಆಸ್ಪತ್ರೆಯು ನಗರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಶಿಕ್ಷಕರಿಗಾಗಿ ರೂಪಿಸಲಾದ ಗುರು ರಕ್ಷಾ, ಗುರು ಶಕ್ತಿ ಮತ್ತು ಗುರು ಸುರಕ್ಷಾ ಪ್ಯಾಕೇಜ್ಗಳ ಅಡಿಯಲ್ಲಿ ಶಿಕ್ಷಕರಿಗೆ ಉಚಿತ ಆರೋಗ್ಯ ಚಿಕಿತ್ಸಾ ಕಾರ್ಡ್ಗಳನ್ನು ನೀಡಿ ಗೌರವಿಸಲಾಯಿತು.
ವೈದ್ಯರಾದ ಡಾ. ರಾಧಾ ಎಸ್. ರಾವ್ ಮತ್ತು ಡಾ. ಭವ್ಯಾ ಎನ್. ಅವರು, ಮಹಿಳೆಯರು ಎದುರಿಸುವ ಅನಾರೋಗ್ಯ ಸಮಸ್ಯೆಗಳು, ಜೀವನಶೈಲಿ ಕಾಯಿಲೆಗಳು ಮತ್ತು ಶಿಕ್ಷಕರು ಯೋಗಕ್ಷೇಮ ಕಾಪಾಡಿಕೊಳ್ಳಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿದರು.
‘ಶಿಕ್ಷಕರಲ್ಲಿ ಧ್ವನಿ ಸಂಬಂಧಿತ ಹಾಗೂ ಕಣ್ಣಿನ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಸಾಮಾನ್ಯವಾಗಿವೆ. ಈ ಅನಾರೋಗ್ಯ ಸಮಸ್ಯೆಗಳು ಶಿಕ್ಷಕರಲ್ಲಿ ಹೆಚ್ಚುತ್ತಿದ್ದರೂ, ಸರಿಯಾದ ಗಮನ ನೀಡುವವರ ಸಂಖ್ಯೆ ವಿರಳ. ಇದರಿಂದಾಗಿ ಶಿಕ್ಷಕರು ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ವೈದ್ಯರು ಹೇಳಿದರು.
‘ಆಸ್ಪತ್ರೆ ಒದಗಿಸುವ ಈ ವಿಶಿಷ್ಟ ಆರೋಗ್ಯ ಪ್ಯಾಕೇಜ್ಗಳು ಹೃದಯದ ಅಪಾಯಗಳ ಪತ್ತೆಯ ಜತೆಗೆ ವಿವಿಧ ಅನಾರೋಗ್ಯ ಸಮಸ್ಯೆಗಳ ತಪಾಸಣೆಗೆ ಸಹಕಾರಿಯಾಗಲಿವೆ’ ಎಂದರು.
ಆರ್ಎಂಎಸ್ ಇಂಟರ್ನ್ಯಾಷನಲ್ ಸ್ಕೂಲ್, ಶ್ರೀಕುಮಾರನ್ ಪಬ್ಲಿಕ್ ಸ್ಕೂಲ್, ದೆಹಲಿ ಪಬ್ಲಿಕ್ ಸ್ಕೂಲ್, ಇನ್ಸೈಟ್ ಅಕಾಡೆಮಿ ಸ್ಕೂಲ್ ಮತ್ತು ಚೈತನ್ಯ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.