ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮವು ರಾಜ್ಯದಾದ್ಯಂತ ಮರಾಠ ಶೈಲಿಯ 40 ಮಿಲಿಟರಿ ಹೋಟೆಲ್ಗಳ ಆರಂಭಕ್ಕೆ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.
ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಪಾಗೋಜಿ,‘ಬೆಂಗಳೂರು ನಗರದಲ್ಲಿ 10 ಮತ್ತು ಉಳಿದ 30 ಜಿಲ್ಲೆಗಳಲ್ಲಿ ತಲಾ ಒಂದು ಮರಾಠ ಶೈಲಿಯ ಮಿಲಿಟರಿ ಹೋಟೆಲ್ಗಳನ್ನು ತೆರೆಯಲು ನೆರವು ನೀಡಲಾಗುವುದು’ ಎಂದು ತಿಳಿಸಿದರು.
ಪ್ರತಿ ಹೋಟೆಲ್ಗೆ ತಲಾ ₹ 5 ಲಕ್ಷ ಸಹಾಯಧನ ಮತ್ತು ₹ 2.5 ಲಕ್ಷಸಾಲವನ್ನು ನಿಗಮದಿಂದ ನೀಡಲಾಗು
ವುದು. ಈ ಯೋಜನೆ ಅನುಷ್ಠಾನಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತ ತಕ್ಷಣ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ನಿಗಮಕ್ಕೆ ₹ 100 ಕೋಟಿ ಅನುದಾನ ಒದಗಿಸಲಾಗಿದೆ. ಇದೇ 19ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಸಮಾ
ರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರಾಠ ಅಭಿವೃದ್ಧಿ ನಿಗಮವನ್ನು ಉದ್ಘಾಟಿಸುವರು. ಬೆಂಗಳೂರಿನ ಗವಿಪುರದ ಭವಾನಿ ದತ್ತ ಪೀಠದ ಗೋಸಾಯಿ ಮಠದ ವೇದಾಂತಾಚಾರ್ಯ, ಮಂಜುನಾಥ ಭಾರತಿ ಸ್ವಾಮೀಜಿ, ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ, ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉನ್ನತ ಶಿಕ್ಷಣ
ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಭಾಗವಹಿಸುವರು ಎಂದು ಮುಳೆ ತಿಳಿಸಿದರು.
ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಕಾಲ ತಲಾ ₹ 1 ಲಕ್ಷ ಪ್ರೋತ್ಸಾಹಧನವನ್ನು ನಿಗಮದಿಂದ ನೀಡಲಾಗುವುದು. ಮರಾಠ ಅಭಿವೃದ್ಧಿ ನಿಗಮದಲ್ಲೂ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.