ADVERTISEMENT

ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 14:37 IST
Last Updated 19 ಜನವರಿ 2026, 14:37 IST
<div class="paragraphs"><p>ಬಂಧನ</p></div>

ಬಂಧನ

   

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ, ₹1.53 ಕೋಟಿ ಪಡೆದು ಮಹಿಳಾ ಟೆಕಿಗೆ ವಂಚಿಸಿದ್ದ ಪ್ರಕರಣದ ಸಂಬಂಧ ವಿಜಯ್‌ರಾಜ್‌ ಗೌಡ ಎಂಬುವರನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವಿಜಯ್‌ರಾಜ್‌ ಗೌಡ ಅವರ ಪತ್ನಿ ಸೌಮ್ಯಾ ಹಾಗೂ ಅವರ ತಂದೆ ಯು.ಜೆ.ಬೋರೇಗೌಡ ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ವೈಟ್‌ಫೀಲ್ಡ್‌ ನಿವಾಸಿ, 29 ವರ್ಷದ ಯುವತಿ ನೀಡಿದ ದೂರು ಆಧರಿಸಿ, ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ವಿಜಯ್‌ ಅವರು ಬಿ.ಇ ಪದವೀಧರರಾಗಿದ್ದು, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

‘2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ವಿಜಯ್ ರಾಜ್ ಪರಿಚಯವಾಯಿತು. ವಿ.ಆರ್‌.ಜಿ ಎಂಟರ್‌ಪ್ರೈಸಸ್‌ ಎಂಬ ಕಂಪನಿ ಇದ್ದು, ರಾಜಾಜಿನಗರ ಮತ್ತು ಸದಾಶಿವನಗರದಲ್ಲಿ ಮನೆಗಳಿವೆ ಎಂದು ಹೇಳಿಕೊಂಡಿದ್ದರು. ಬೆಂಗಳೂರಿನಲ್ಲಿ ₹715 ಕೋಟಿ ಆಸ್ತಿ ಇದೆ ಎಂದು ನಂಬಿಸಿದ್ದರು. ಒಟ್ಟಿಗೆ ಸೇರಿ ಬ್ಯುಸಿನೆಸ್‌ ಮಾಡುವ ನೆಪ ಹೇಳಿ ಹಂತ ಹಂತವಾಗಿ ₹1.75 ಕೋಟಿ ಪಡೆದುಕೊಂಡಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಕೆಂಗೇರಿ ಬಳಿ ನನ್ನನ್ನು ಕರೆಯಿಸಿಕೊಂಡು ತನ್ನ ಕುಟುಂಬದವರಿಗೆ ಪರಿಚಯಿಸಿದ್ದರು. ಪರಿಚಯ ಗಟ್ಟಿಯಾದ ನಂತರ ವಿಜಯ್, ತನ್ನ ಆಸ್ತಿಯ ಸಂಬಂಧ ಇ.ಡಿ ದಾಳಿಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಎಂದು ವಿವಿಧ ಕೋರ್ಟ್‌ಗಳಲ್ಲಿ ಪ್ರಕರಣ ನಡೆಯುತ್ತಿರುವ ನಕಲಿ ದಾಖಲೆ ತೋರಿಸಿ, ಹಣ ಪಡೆದುಕೊಂಡಿದ್ದರು. ಮದುವೆಗೆ ಹೆಣ್ಣು ನೋಡಲು ನನ್ನ ಮನೆಗೆ ಬರುವುದಾಗಿ ಸುಳ್ಳು ಹೇಳಿ ಮತ್ತೆ ನನ್ನ ಬ್ಯಾಂಕ್ ಖಾತೆಯಿಂದ ಆತನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದರು. ಅಲ್ಲದೇ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.