ADVERTISEMENT

ಬಿಬಿಎಂಪಿ ಮೇಯರ್ ಆಯ್ಕೆ: ಸಂತೋಷ್ ಮೇಲುಗೈ, ಗುಂಪುಗಾರಿಕೆಗೆ ಸೊಪ್ಪು ಹಾಕದ ಬಿಜೆಪಿ

ಹಳೆ ಹುಲಿಗಳು ಮೂಲೆಗುಂಪು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:15 IST
Last Updated 1 ಅಕ್ಟೋಬರ್ 2019, 20:15 IST
ಎಂ.ಗೌತಮ್‌ ಕುಮಾರ್‌ , ರಾಮಮೋಹನ ರಾಜು
ಎಂ.ಗೌತಮ್‌ ಕುಮಾರ್‌ , ರಾಮಮೋಹನ ರಾಜು    

ಬೆಂಗಳೂರು: ಪಕ್ಷದ ಹಿರಿತಲೆಗಳ ಒತ್ತಡಗಳಿಗೆ ಮಣಿಯದ ಬಿಜೆಪಿ, ಸಂಘ ಪರಿವಾರದ ಜೊತೆ ಉತ್ತಮ ನಂಟು ಹೊಂದಿರುವ ವ್ಯಕ್ತಿಯನ್ನೇ ಮೇಯರ್‌ ಆಗಿ ಮಾಡಿದೆ. ತನ್ಮೂಲಕ ಪಕ್ಷದಲ್ಲಿ ಗುಂಪುಗಾರಿಕೆಗೆ ಸೊಪ್ಪು ಹಾಕುವುದಿಲ್ಲ,ಭಿನ್ನಮತದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆ.

ಸಚಿವರು ಹಾಗೂ ಶಾಸಕರು ಸೂಚಿಸಿದ ಅಭ್ಯರ್ಥಿಯ ಬದಲು ಯುವನಾಯಕ ಎಂ.ಗೌತಮ್‌ ಕುಮಾರ್‌ ಅವರನ್ನು ಮೇಯರ್‌ ಆಗಿ ಹಾಗೂ ರಾಮಮೋಹನ ರಾಜು ಅವರನ್ನು ಉಪಮೇಯರ್‌ ಆಗಿ ಬಿಜೆಪಿ ಆಯ್ಕೆ ಮಾಡಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸೂಚನೆ ಮೇರೆಗೇ ಈ ಆಯ್ಕೆ ನಡೆದಿದೆ.

ಅಭ್ಯರ್ಥಿ ಆಯ್ಕೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ದಂತೆ ಸಮಿತಿ ರಚಿಸಲಾಗಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ‘ಈ ಸಮಿತಿಗೆ ಮಾನ್ಯತೆಯೇ ಇಲ್ಲ’ ಎಂದು ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಪಕ್ಷದ ತೀರ್ಮಾನ ಅಂತಿಮವೇ ಹೊರತು, ಸರ್ಕಾರದ್ದಲ್ಲ ಎಂಬ ಸಂದೇಶವನ್ನೂ ಸಾರಿದ್ದರು.

ADVERTISEMENT

ಕೆಲವು ಆಕಾಂಕ್ಷಿಗಳು ಜಾತಿ ಆಧಾರದಲ್ಲಿ ಲಾಬಿ ನಡೆಸಿದ್ದರು. ಒಕ್ಕಲಿಗರಿಗೆ 16 ವರ್ಷಗಳಿಂದ ಅಧಿಕಾರ ಸಿಕ್ಕಿಲ್ಲ ಎಂದು ಬಿಂಬಿಸಿದ್ದರು. ಇನ್ನು ಕೆಲವು ಸದಸ್ಯರು ಶಾಸಕರ ಮೂಲಕ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು. ಇಂತಹ ರಾಜಕೀಯ ನಡೆಯದು ಎಂಬ ಸ್ಪಷ್ಟ ಸೂಚನೆಯನ್ನು ಪಕ್ಷವು ರವಾನಿಸಿದೆ.

* ನಳಿನ್‌ ಕುಮಾರ್‌ ಕಟೀಲ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ ದೊರೆತ ಮೊದಲ ಗೆಲುವು ಇದು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ

ಬಿ.ಎಸ್‌.ಯಡಿಯೂರಪ್ಪ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.