ADVERTISEMENT

ಎಂಬಿಬಿಎಸ್ ಸೀಟು: ಇಸ್ರೊ ವಿಜ್ಞಾನಿಗೆ ₹ 18 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 20:45 IST
Last Updated 13 ನವೆಂಬರ್ 2022, 20:45 IST

ಬೆಂಗಳೂರು: ನಗರದ ಬಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ₹ 18 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇಸ್ರೊ ವಿಜ್ಞಾನಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಅರುಣ್ ದಾಸ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಜ್ಞಾನಿಯ ಮಗಳು ದ್ವಿತೀಯ ಪಿಯು ಪೂರ್ಣಗೊಳಿಸಿ, ಎಂಬಿಬಿಎಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದಿದ್ದ ಆರೋಪಿ ಅರುಣ್‌ದಾಸ್, ಏಜೆನ್ಸಿಯೊಂದರ ಪ್ರತಿನಿಧಿ ಎಂಬುದಾಗಿ ಪರಿಚಯಿಸಿ ಕೊಂಡು ವಿಜ್ಞಾನಿಗೆ ಕರೆ ಮಾಡಿದ್ದ. ಮಗಳಿಗೆ ಬೆಂಗಳೂರಿನ ‘ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌’ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಕಾಲೇಜು ಶುಲ್ಕ ಹಾಗೂ ಡೋನೇಷನ್ ಹೆಸರಿನಲ್ಲಿ ಆರೋಪಿ ಹಂತ ಹಂತವಾಗಿ ₹ 18 ಲಕ್ಷ ಪಡೆದಿದ್ದ. ಇದಾದ ನಂತರ ಆರೋಪಿ ಯಾವುದೇ ಸೀಟು ಕೊಡಿಸದೇಪರಾರಿಯಾಗಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.