
ಬೆಂಗಳೂರು: ‘ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಉಡಾನ್ ಯೋಜನೆಯಡಿ, 12 ವರ್ಷಗಳಲ್ಲಿ 1,200 ಎಂಬಿಬಿಎಸ್ ಮತ್ತು 600ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲಾಗಿದೆ’ ಎಂದು ನಾರಾಯಣ ಹೆಲ್ತ್ನ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಬಡ ರೈತರು, ಕಾರ್ಮಿಕರ ಮಕ್ಕಳಿಗೆ ‘ಉಡಾನ್’ ಯೋಜನೆಯಡಿ ನೆರವು ನೀಡಲಾಗುತ್ತಿದೆ. 1,500ಕ್ಕೂ ಹೆಚ್ಚು ನೀಟ್ ಆಕಾಂಕ್ಷಿಗಳಿಗೆ ಕೋಚಿಂಗ್ ಪಡೆಯಲು ನೆರವು ನೀಡಲಾಗಿದೆ’ ಎಂದು ಹೇಳಿದರು.
‘2024-25ರ ಶೈಕ್ಷಣಿಕ ವರ್ಷದಲ್ಲಿ ಉಡಾನ್ ನೆರವಿನಿಂದ 36 ವಿದ್ಯಾರ್ಥಿಗಳು ಏಮ್ಸ್ನಲ್ಲಿ ಪ್ರವೇಶ ಪಡೆದರೆ, ನಾಲ್ಕು ವಿದ್ಯಾರ್ಥಿಗಳು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಏಮ್ಸ್ ನಾಗ್ಪುರ, ಬೆಂಗಳೂರು ವೈದ್ಯಕೀಯ ಕಾಲೇಜು ಸೇರಿ ದೇಶದಾದ್ಯಂತ 30ಕ್ಕೂ ಹೆಚ್ಚು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ’ ಎಂದರು.
‘ಕಳೆದ ಆರ್ಥಿಕ ವರ್ಷದಲ್ಲಿ ಈ ಕಾರ್ಯಕ್ರಮದಡಿ ಒಬ್ಬ ವೈದ್ಯರಿಗೆ ತರಬೇತಿ ಪಡೆಯಲು ಸರಾಸರಿ ₹50,400 ಭರಿಸಲಾಗಿದೆ. ಭಾರತೀಯ ವೈದ್ಯಕೀಯ ವ್ಯವಸ್ಥೆ ಬಲಪಡಿಸಲು ಈ ಯೋಜನೆ ಸಹಕಾರಿಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.